ಶಿರಸಿ: ‘ಪಕ್ಷ ಬಿಡಲು ಕೋಟಿ ಹಣ ಪಡೆದಿದ್ದೇವೆ ಎನ್ನುವುದಕ್ಕೆ ಸಿದ್ದರಾಮಯ್ಯನವರಲ್ಲಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಅನರ್ಹಗೊಂಡಿರುವ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸವಾಲೆಸೆದರು.
‘ಅನರ್ಹರಾದ ಶಾಸಕರ ಮೇಲೆ ಅನಗತ್ಯ ಆರೋಪ ಮಾಡುವುದು, ಬೇಜವಾಬ್ದಾರಿ ಹೇಳಿಕೆ ನೀಡುವುದು ಸಿದ್ದರಾಮಯ್ಯ ಅವರ ಸ್ಥಾನಮಾನಕ್ಕೆ ಭೂಷಣವಲ್ಲ. ನಾವು ಅಧಿಕಾರ ಮತ್ತು ಹಣಕ್ಕಾಗಿ ಪಕ್ಷದಿಂದ ಹೊರ ಹೋಗಿದ್ದೇವೆ ಎಂದು ಮಾತನಾಡುವವರು, ಅಧಿಕಾರ ಬಿಡಲು ಸಿದ್ಧವಿದ್ದಿದ್ದರೆ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಕೊನೆಯ ತನಕವೂ ಅಧಿಕಾರ ಹಿಡಿದಿರಬೇಕು ಎಂಬ ಕಾಂಗ್ರೆಸ್ನ ಕೆಲವರ ಮಾನಸಿಕ ಸ್ಥಿತಿಯೇ ಈ ಪರಿಸ್ಥಿತಿಗೆ ಕಾರಣವಾಯಿತು. ಪಕ್ಷದ ನಾಯಕತ್ವ ಆತ್ಮಾವಲೋಕನ ಮಾಡಿಕೊಳ್ಳುವ ಕಾಲದ ಇದಾಗಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರಲಿಲ್ಲ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೆವು. ಆದರೆ, ಕಾಂಗ್ರೆಸ್ ಪಕ್ಷ ನಮ್ಮನ್ನು ಪಕ್ಷದಿಂದ ಅಮಾನತುಗೊಳಿಸಿದೆ. ನನ್ನ ಜೊತೆಗಿರುವ ಮುಂಡಗೋಡ, ಯಲ್ಲಾಪುರ ಬ್ಲಾಕ್ ಅಧ್ಯಕ್ಷರನ್ನು ಸಹ ವಜಾಗೊಳಿಸಲಾಗಿದೆ. ಇನ್ನು ಕಾಂಗ್ರೆಸ್ ವಜಾಗೊಳಿಸಲು ಅವಕಾಶ ಕೊಡುವುದಿಲ್ಲ. ನನ್ನ ಬೆಂಬಲಿಗರೇ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ’ ಎಂದ ಹೆಬ್ಬಾರ್, ‘ಬಿಜೆಪಿಗರು ನನ್ನ ಮೇಲೆ ಇಟ್ಟ ಅಭಿಮಾನಕ್ಕೆ ಕೃತಜ್ಞ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಬೆಂಬಲಿಗರೊಂದಿಗೆ ಚರ್ಚಿಸಿ, ಅಂತಿಮ ಕೈಗೊಳ್ಳುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.