ADVERTISEMENT

ಕ್ವಾರಂಟೈನ್ ವ್ಯವಸ್ಥೆಯಲ್ಲಿ ಬದಲಾವಣೆ: ಡಾ.ಸುಧಾಕರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 13:10 IST
Last Updated 3 ಜೂನ್ 2020, 13:10 IST
   

ಮಂಗಳೂರು: ಕ್ವಾರಂಟೈನ್ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದೆ.‌ ಇದುವರೆಗೆ ಸಾಂಸ್ಥಿಕ‌ ಕ್ವಾರಂಟೈನ್ ಮಾಡಲಾಗುತ್ತಿದ್ದು, ಇದಕ್ಕೆ ಹೋಟೆಲ್, ಸರ್ಕಾರಿ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ಇದೀಗ‌ ಈ ಎಲ್ಲ‌ ಸಂಸ್ಥೆಗಳನ್ನು ಮುಕ್ತ‌ ಮಾಡಬೇಕಾಗಿದೆ. ಹೀಗಾಗಿ ಮನೆಗಳಲ್ಲಿ‌ ಕ್ವಾರಂಟೈನ್ ಮಾಡುವ ಬಗ್ಗೆ‌ ಚಿಂತನೆ ಮಾಡಲಾಗುತ್ತಿದೆ ಎಂದು‌ ಸಚಿವ‌ ಡಾ.ಸುಧಾಕರ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ‌ ಕ್ವಾರಂಟೈನ್ ಬಗ್ಗೆ ಮಾರ್ಗಸೂಚಿ‌ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬಂದವರಿಗೆ 7 ದಿ‌ನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕೋ ಬೇಡವೋ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ವಿದೇಶದಿಂದ ಬಂದವರ ವರದಿ ನೆಗೆಟಿವ್ ಇದ್ದರೆ, ಹೋಂ ಕ್ವಾರಂಟೈನ್ ಮಾಡಲಾಗುವುದು.

ರೋಗಲಕ್ಷಣ ಇದ್ದರೆ, 7 ದಿನಗಳ‌ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು ಎಂದರು. ಬೇರೆ ದೇಶಗಳಲ್ಲೂ ಹೋಂ ‌ಕ್ವಾರಂಟೈನ್ ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಮನೆಗಳಲ್ಲಿ ಕ್ವಾರಂಟೈನ್ ಮಾಡಿದಲ್ಲಿ, ಅಗತ್ಯ ವಸ್ತುಗಳನ್ನು ಸರ್ಕಾರದಿಂದಲೇ ಪೂರೈಸಲು ಸಲಹೆಗಳು ಬಂದಿವೆ. ಇದನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು. ರ್ಯಾಪಿಡ್ ಟೆಸ್ಟ್‌ ಅಗತ್ಯವಿಲ್ಲ ಎಂದ ಅವರು, ವೈದ್ಯಕೀಯ ಕಾಲೇಜುಗಳನ್ನು ಪ್ರಯೋಗಾಲಯ ಆರಂಭಿಸಲೇಬೇಕು. ಇದು ಕಡ್ಡಾಯವಾಗಿದೆ. ಆರಂಭಿಸದೇ ಇದ್ದಲ್ಲಿ ಸೂಕ್ತ ಕ್ರ‌ಮ ಕೈಗೊಳ್ಳಲಾಗುವುದು. ಈಗಾಗಲೇ 64 ಪ್ರಯೋಗಾಲಯ ಆರಂಭಿಸಲಾಗಿದೆ ಎಂದರು.

ADVERTISEMENT

ಶೇ 98 ರಷ್ಟು ಜನರಲ್ಲಿ ಯಾವುದೇ ರೋಗ ಲಕ್ಷಣವಿಲ್ಲ.14 ದಿನಗಳ‌ ನಂತರ ವೈರಾಣು ದೇಹದಲ್ಲಿ ಇರುವುದಿಲ್ಲ. ಹಾಗಾಗಿ 14 ದಿನಗಳ‌ ಕ್ವಾರಂಟೈನ್ ಕಡ್ಡಾಯ. ಆದರೆ, ಗಂಟಲು ದ್ರವದ ಮಾದರಿ ತಪಾಸಣೆ‌ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿ ಯಾವುದೇ ಸವಾಲು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಸೋಂಕಿನ ಮೂಲ ಪತ್ತೆ ಮಾಡುವುದು ಈಗ ಮುಖ್ಯವಲ್ಲ. ಜನರ ಆರೋಗ್ಯವನ್ನು ಕಾಪಾಡುವುದು ಅಗತ್ಯವಾಗಿದೆ ಎಂದರು.

ಕಾಲಕ್ರಮೇಣ ಇದು ಕಡಿಮೆ ಆಗಲಿದೆ. ಸೋಂಕಿತರನ್ನು‌ ಕಳಂಕಿತರಂತೆ ನೋಡುವುದು ಬೇಡ. ಜನರು ಅಗತ್ಯ‌ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.

10 ವರ್ಷಗಳ‌ ಒಳಗಿನ ಮಕ್ಕಳ‌ ಆರೋಗ್ಯ ರಕ್ಷಣೆ ಅಗತ್ಯವಾಗಿದೆ. ಹಾಗಾಗಿ ಶಾಲೆಗಳ ನಿರ್ಬಂಧ ಸಡಿಲಿಕೆ ಕೊನೆಯ ಹಂತದ್ದಾಗಿರುತ್ತದೆ‌ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.