ADVERTISEMENT

ವಿಧಾನಸಭೆಯಲ್ಲಿ ಸ್ಥಾನ ಅದಲು ಬದಲು, ಕಮಲ ಪಾಳಯದ ಶಾಸಕರ ಮೊಗದಲ್ಲಿ ಖುಷಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:05 IST
Last Updated 29 ಜುಲೈ 2019, 20:05 IST
 ಆಡಳಿತ ಪಕ್ಷದ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ಸಾಲಿನಲ್ಲಿ ಸಿದ್ದರಾಮಯ್ಯ ಪಕ್ಕದಲ್ಲಿ ಆರ್.ವಿ.ದೇಶ‍ಪಾಂಡೆ. ಪ್ರಜಾವಾಣಿ ಚಿತ್ರ.
ಆಡಳಿತ ಪಕ್ಷದ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ಸಾಲಿನಲ್ಲಿ ಸಿದ್ದರಾಮಯ್ಯ ಪಕ್ಕದಲ್ಲಿ ಆರ್.ವಿ.ದೇಶ‍ಪಾಂಡೆ. ಪ್ರಜಾವಾಣಿ ಚಿತ್ರ.   

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ನಾಯಕರ ಬೈಗುಳ, ಟೀಕೆ ಟಿಪ್ಪಣಿಗಳನ್ನು ಕಳೆದ ವಾರ ಮೌನದಿಂದ, ತಾಳ್ಮೆಯಿಂದ ಆಲಿಸಿದ್ದ ಕಮಲ ಪಾಳಯದ ಶಾಸಕರ ಮೊಗದಲ್ಲಿ ಸೋಮವಾರ ಖುಷಿ ಎದ್ದು ಕಾಣುತ್ತಿತ್ತು.

ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯನ್ನು ಇಂದೇ ಮುಗಿಸಿ ಎಂದು ಕಳೆದ ವಾರ ಪಟ್ಟು ಹಿಡಿದಿದ್ದ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಹಸನ್ಮುಖಿಯಾಗಿದ್ದರು. ಕಾಂಗ್ರೆಸ್‌–ಜೆಡಿಎಸ್‌ ನಾಯಕರ ವಾಗ್ಬಾಣಗಳಿಗೆ ನಗುವೇ ಉತ್ತರವಾಗಿತ್ತು. ಪೂರಕ ಅಂದಾಜು, ಹಣಕಾಸು ಮಸೂದೆಗೆ ವಿರೋಧ ಪಕ್ಷದ ನಾಯಕರು ತಗಾದೆ ಎತ್ತಿದ್ದಾಗ ಹಿರಿಯ ಅಧಿಕಾರಿಗಳ ಬಳಿಗೆ ತೆರಳಿ ಮಾಹಿತಿ ಪಡೆದುಕೊಂಡರು.

ಕುಶಲೋಪರಿ

ADVERTISEMENT

ಸದನದ ಕಲಾಪ ಆರಂಭವಾಗುವ ಮುನ್ನ ಬಿ.ಎಸ್‌.ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಬಳಿಕ ಕುಶಲೋಪರಿ ವಿಚಾರಿಸಿದರು. ಸದನ ಕಲಾಪ ಮುಂದೂಡಿಕೆಯಾದ ಬಳಿಕ ಸಿದ್ದರಾಮಯ್ಯ– ಯಡಿಯೂರಪ್ಪ ಮುಖಾಮುಖಿಯಾದರು. ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಮತ್ತೊಮ್ಮೆ ಶುಭ ಕೋರಿದರು.

ಅದಲು ಬದಲು– ಆಡಳಿತ ಪಕ್ಷದ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಕ್ಕದಲ್ಲಿ ಗೋವಿಂದ ಕಾರಜೋಳ, ಉಮೇಶ ಕತ್ತಿ, ವಿ.ಸೋಮಣ್ಣ, ಜಗದೀಶ ಶೆಟ್ಟರ್‌, ಆರ್‌.ಅಶೋಕ್‌, ಕೆ.ಎಸ್‌.ಈಶ್ವರಪ್ಪ, ಸಿ.ಎಂ. ಉದಾಸಿ, ಕೆ.ಜಿ.ಬೋಪಯ್ಯ ಅವರಿಗೆ ಸ್ಥಾನ ನಿಗದಿಪಡಿಸಲಾಗಿದೆ. ಸಚಿವ ಸಂಪುಟ ವಿಸ್ತರಣೆಯಾದ ಬಳಿಕ, ಮೊದಲ ಮೂರು ಸಾಲನ್ನು ಸಚಿವರಿಗೆ ಮೀಸಲಿಡಲಾಗುತ್ತದೆ.ವಿರೋಧ ಪಕ್ಷದ ಸಾಲಿನಲ್ಲಿ ಸಿದ್ದರಾಮಯ್ಯ ಪಕ್ಕದಲ್ಲಿ ಆರ್.ವಿ.ದೇಶ‍ಪಾಂಡೆ, ರಾಮಲಿಂಗಾ ರೆಡ್ಡಿ, ಡಿ.ಕೆ.ಶಿವಕುಮಾರ್‌ ಅವರಿಗೆ ಸೀಟು ನೀಡಲಾಗಿದೆ. ನಂತರದ ಆಸನನಗಳು ಜೆಡಿಎಸ್‌ ಶಾಸಕರಾದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ ಅವರಿಗೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.