ADVERTISEMENT

“ಮಕ್ಕಳ ವಾಣಿ – ನಲಿಯೋಣ ಕಲಿಯೋಣ” ಯೂಟ್ಯೂಬ್ ಚಾನಲ್‌ಗೆ ಮುಖ್ಯಮಂತ್ರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 11:11 IST
Last Updated 16 ಏಪ್ರಿಲ್ 2020, 11:11 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಕ್ಕಳವಾಣಿ ಯೂಟ್ಯೂಬ್ ಚಾನಲ್ ಉದ್ಘಾಟಿಸಿದರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಕ್ಕಳವಾಣಿ ಯೂಟ್ಯೂಬ್ ಚಾನಲ್ ಉದ್ಘಾಟಿಸಿದರು   

ಬೆಂಗಳೂರು:ರಾಜ್ಯವು ಕೊರೋನಾ ಸಂಕಷ್ಟದಲ್ಲಿ ಇರುವ ಈ ಸಮಯದಲ್ಲಿ ಮನೆಯಲ್ಲಿ ಇರುವ ಮಕ್ಕಳ ಮನೋರಂಜನೆಗಾಗಿ ಶಿಕ್ಷಣ ಇಲಾಖೆಯು ಆರಂಭಿಸಿರುವ ಮಕ್ಕಳ ವಾಣಿ ನಲಿಯೋಣ ಕಲಿಯೋಣ ಮಕ್ಕಳ ಯೂಟ್ಯೂಬ್ ಚಾನಲ್ ನ್ನು ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು ಲೋಕಾರ್ಪಣೆಗೊಳಿಸಿದರು.

'ಶಿಕ್ಷಣ ಇಲಾಖೆಯ ಈ ಕ್ರಮವು ಅತ್ಯಂತ ಸಕಾಲಿಕವೂ ಸಮರ್ಪಕವೂ ಆಗಿದ್ದು, ತಂತ್ರಜ್ಞಾನದ ಸದ್ಬಳಕೆಗೆ ಇದೊಂದು ಉದಾಹರಣೆಯಾಗಿದೆ' ಎಂದರು.' ಶಾಲಾ ಮಕ್ಕಳು ಸುದೀರ್ಘ ಅವಧಿಗೆ ಶಾಲೆಯಿಂದ ದೂರವಿರುವ ವಿದ್ಯಾರ್ಥಿಗಳಿಗೆ ಅವರ ಬುದ್ಧಿಯನ್ನು ಪ್ರಚೋದಿಸುವ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಈ ಮಾರ್ಗೋಪಾಯ ವಿನೂತನವಾಗಿದೆ ಹಾಗೂ ಸರ್ಕಾರದ ಈ ಕ್ರಮ ವಿದ್ಯಾರ್ಥಿಗಳ ಮತ್ತು ಪೋಷಕರ ಮನ ಗೆಲ್ಲಲಿದೆ'ಎಂದು ಅವರು ಹೇಳಿದರು.

ಮನೆಯಲ್ಲಿ ಇರುವ ಮಕ್ಕಳನ್ನು ಕತೆ, ಹಾಡು, ಚಿತ್ರಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ ಮುಂತಾದವುಗಳ ಮೂಲಕ ತಲುಪಿ ಅವರನ್ನು ರಂಜಿಸುವುದರ ಜೊತೆಗೆ ಆಸಕ್ತಿಕರವಾದ ಕಲಿಕೆಗೆ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿರುವ ಈ ಪ್ರಯತ್ನವು ಅನನ್ಯವಾಗಿದ್ದು ಈ ಯೋಜನೆಯ ರೂವಾರಿಗಳಾದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರನ್ನು ಹಾಗೂ ಇಲಾಖೆಯ ಅಧಿಕಾರಿಗಳನ್ನು ಯಡಿಯೂರಪ್ಪ ಅಭಿನಂದಿಸಿದರು.

ADVERTISEMENT

ಮಕ್ಕಳ ವಾಣಿ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರುವ ಕಾರ್ಯಕ್ರಮಗಳು ಇತರೆ ಮಾಧ್ಯಮಗಳಾದ ರೇಡಿಯೋ, ಟಿವಿಗಳಲ್ಲಿಯೂ ಸಹ ಪ್ರಸಾರ ಮಾಡಲು ಸೂಕ್ತವಾಗಿರುವಂತೆ ರೂಪಿಸಲಾಗಿದ್ದು ಪ್ರತಿ ದಿನ ಮುಂಜಾನೆ 10.30 ಗಂಟೆಗೆ https://www.youtube.com/channel/UCDaVbK0F5b7y4hgSZrTwZNg ಲಿಂಕ್‌‌ನಲ್ಲಿ ಈ ಕಾರ್ಯಕ್ರಮಗಳು ಒಂದು ಗಂಟೆಯ ಅವಧಿಗೆ ಪ್ರಸಾರಗೊಳ್ಳಲಿವೆ. ಈ ಚಾನಲ್‌‌ನಲ್ಲಿ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಶಿಕ್ಷಕರು, ಶಿಕ್ಷಣಾಸಕ್ತರು ತಯಾರಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದು ಸ್ವೀಕೃತವಾಗುವ ಸಾಮಗ್ರಿಗಳನ್ನು ಅವುಗಳ ನಾವೀನ್ಯತೆ, ಸೂಕ್ತತೆ ಹಾಗೂ ಸಮಂಜಸತೆಯ ಬಗ್ಗೆ ಪರಿಶೀಲಿಸಿ ಪ್ರಸಾರ ಮಾಡುವ ನಿರ್ಧಾರವನ್ನು ಇದಕ್ಕಾಗಿಯೇ ರಚಿಸಲಾಗಿರುವ ಸಂಪಾದಕ ಮಂಡಳಿಯು ತೆಗೆದುಕೊಳ್ಳಲಿದೆ ಎಂದಿದ್ದಾರೆ. ಮಕ್ಕಳ ಮನೋರಂಜನೆಗಾಗಿ ಅತ್ಯುತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಮಕ್ಕಳ ವಾಣಿ ನಲಿಯೋಣ ಕಲಿಯೋಣ ಚಾನಲ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ಗಂಟೆಗೆ ಪ್ರಸಾರಗೊಳ್ಳುವ ಕಾರ್ಯಕ್ರಮಗಳನ್ನು ವೀಕ್ಷಿಸಲು ರಾಜ್ಯದ ಎಲ್ಲಾ ಶಿಕ್ಷಕರು, ಪೋಷಕರು ತಮ್ಮ ಮಕ್ಕಳಿಗೆ ಪ್ರೇರೇಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.