ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದರಿಂದ ಇದೇ 25 ರಂದು ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಏರ್ಪಡಿಸಿದ್ದ ಭೋಜನ ಕೂಟವನ್ನು ರದ್ದುಪಡಿಸಲಾಗಿದೆ.
ಮಂಗಳವಾರ ರಾತ್ರಿ ಎಲ್ಲ ಶಾಸಕರಿಗೂ ವಾಟ್ಸ್ಆ್ಯಪ್ ಸಂದೇಶದ ಮೂಲಕ ಆಹ್ವಾನ ಕಳುಹಿಸಲಾಗಿತ್ತು. ಆದರೆ, ಬುಧವಾರ ಬೆಳಿಗ್ಗೆ ಸ್ವತಃ ಮುಖ್ಯಮಂತ್ರಿಯವರಿಂದಲೇ ಸೂಚನೆ ಬಂದ ಕಾರಣ ಭೋಜನ ಕೂಟ ರದ್ದುಪಡಿಸಲಾಯಿತು ಎಂದು ಮೂಲಗಳು ಹೇಳಿವೆ.
ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ಬಂದ ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ ಎಂದು ಮಾಧ್ಯಮಕ್ಕೆ ಹೇಳಿದ್ದರು. ಅದೇ ದಿನ ರಾತ್ರಿ ಅದು ಶಾಸಕಾಂಗ ಪಕ್ಷದ ಸಭೆಯಲ್ಲ, ಶಾಸಕರಿಗೆ ಔತಣ ಕೂಟ ನೀಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಸ್ಪಷ್ಟನೆ ನೀಡಿತ್ತು.
ಔತಣ ಕೂಟಕ್ಕೆ ಶಾಸಕರನ್ನು ಆಹ್ವಾನಿಸುವಂತೆ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಅವರಿಗೆ ಯಡಿಯೂರಪ್ಪ ಮಂಗಳವಾರ ಸೂಚಿಸಿದ್ದರು. ಎರಡೆರಡು ಬಾರಿ ಖಚಿತ ಪಡಿಸಿಕೊಂಡ ಬಳಿಕವೇ ಸುನಿಲ್ ಕುಮಾರ್ ಆಹ್ವಾನವನ್ನು ಕಳುಹಿಸಿದರು. ಆದರೆ, ಬುಧವಾರ ರದ್ದುಪಡಿಸುವಂತೆ ಸೂಚನೆ ಬಂದಿತು ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.