ADVERTISEMENT

ಕಲಬುರ್ಗಿ: ಸಕಾಲಕ್ಕೆ ರಕ್ತ ಸಿಗದೆ ಮಗು ಸಾವು –ಪೋಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 14:30 IST
Last Updated 7 ಜೂನ್ 2019, 14:30 IST
   

ಕಲಬುರ್ಗಿ: ತಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ಸಕಾಲಕ್ಕೆ ರಕ್ತ ಕೊಡದಿದ್ದಕ್ಕಾಗಿ ಸಾವಿಗೀಡಾಗಿದ್ದು, ರಕ್ತಭಂಡಾರದ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಗುವಿನ ಪೋಷಕರು ಜಿಲ್ಲಾ ಆಸ್ಪತ್ರೆ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಆಳಂದ ತಾಲ್ಲೂಕಿನ ಭೀಮಪುರ ಗ್ರಾಮದ ಹರೀಶ ಹೂವಪ್ಪ (6) ಸಾವಿಗೀಡಾದ ಬಾಲಕ.

ಮಗುವಿಗೆ O+ ಗುಂಪಿನ ರಕ್ತ ಅಗತ್ಯವಿತ್ತು. ಬೆಳಿಗ್ಗೆ 11ಕ್ಕೇ ಹೂವಪ್ಪ ಹಾಗೂ ಕವಿತಾ ದಂಪತಿ ಆಸ್ಪತ್ರೆಗೆ ಬಂದಿದ್ದರು. ಮಗುವಿನ ಸ್ಥಿತಿಯನ್ನು ಹೇಳಿದರೂ ವೈದ್ಯರು ಸ್ಪಂದಿಸಲಿಲ್ಲ‌. ಸಂಜೆ 4ಕ್ಕೆ ರಕ್ತ ಕೊಡಲಾಯಿತು. ಆದರೆ ಅಷ್ಟರಲ್ಲಿ ‌ನಿತ್ರಾಣಗೊಂಡಿದ್ದ ಮಗು ಕೊನೆಯುಸಿರೆಳೆಯಿತು.

ADVERTISEMENT

ಈ ಕುರಿತು ಮಾತನಾಡಿದ ಹೂವಪ್ಪ, ಆರು ವರ್ಷಗಳಿಂದ ಮಗನಿಗೆ ರಕ್ತದ ವ್ಯವಸ್ಥೆ ಮಾಡುತ್ತಿದ್ದೆವು. ಬಹುತೇಕ ಸಂದರ್ಭದಲ್ಲಿ ‌ನಾನು, ನನ್ನ ಹೆಂಡತಿ ರಕ್ತ ಕೊಟ್ಟಿದ್ದೆವು. ಕಾಲಕಾಲಕ್ಕೆ ಮಗುವಿಗೆ ರಕ್ತ ಕೊಡಬೇಕಾಗಿತ್ತು. ಅದಕ್ಕಾಗಿ ‌ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದೆವು. ಈಗ ಮಗನೇ ಸಾವಿಗೀಡಾಗಿದ್ದಾನೆ ಎಂದು ಕಣ್ಣೀರಾದರು.

ಸ್ಥಳಕ್ಕೆ ಭೇಟಿ ನೀಡಿದ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಮಗುವಿನ ಪೋಷಕರು ದೂರು ಕೊಟ್ಟರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಆಸ್ಪತ್ರೆಯ ಅಂಬುಲೆನ್ಸ್ ಮೂಲಕ ‌ಮಗುವಿನ ಶವವನ್ನು ಗ್ರಾಮಕ್ಕೆ‌ ಕಳಿಸಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.