ಕಲಬುರ್ಗಿ: ‘ಇಸ್ರೊದಿಂದ 2019ರಲ್ಲಿ 220 ಉಪಗ್ರಹಗಳನ್ನು ಉಡಾವಣೆ ಮಾಡಲು ವಿವಿಧ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಒಂದೇ ವರ್ಷದಲ್ಲಿ ಇಷ್ಟು ಉಪಗ್ರಹ ಉಡಾಯಿಸಿದ ಕೀರ್ತಿಗೆ ಭಾರತ ಪಾತ್ರವಾಗಲಿದೆ’ ಎಂದು ಇಸ್ರೊ ನಿವೃತ್ತ ವಿಜ್ಞಾನಿ ಡಾ.ಸಿ.ಡಿ. ಪ್ರಸಾದ್ ಹೇಳಿದರು.
ಇಲ್ಲಿ ನಡೆಯುತ್ತಿರುವ 26ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾನುವಾರ ಮಾತನಾಡಿದ ಅವರು, ‘ಉಪಗ್ರಹ ವಿಜ್ಞಾನದಲ್ಲಿ ನಾವೀಗ ಯಾವ ದೇಶವನ್ನೂ ಆಶ್ರಯಿಸಬೇಕಿಲ್ಲ. ಇಸ್ರೊ ವಿಶ್ವಮಟ್ಟದ ಪ್ರಬಲ ಸಂಸ್ಥೆಯಾಗಿದೆ’ ಎಂದರು.
‘ಈ ಮುಂಚೆ ಉಪಗ್ರಹ ಉಡಾವಣೆ ತಂತ್ರಜ್ಞಾನವನ್ನು ಅಮೆರಿಕ ಸಬರಾಜು ಮಾಡುತ್ತಿತ್ತು. ಅದಕ್ಕಾಗಿ ಪ್ರತಿಬಾರಿ ₹ 600 ಕೋಟಿ ನೀಡಬೇಕಾಗಿತ್ತು. ಆದರೆ, ಈಗ ಭಾರತವು ಕ್ರಯೊಜಿನಿಕ್ ಎಂಜಿನ್ ಸೇರಿದಂತೆ ಪ್ರತಿ ಹಂತದ ತಾಂತ್ರಿಕ ಸಾಮರ್ಥ್ಯ ಹೊಂದಿದ್ದು, ವಿಶ್ವದ ಬೇಡಿಕೆಯ ಮಾರುಕಟ್ಟೆಯಾಗಿದೆ. ಪ್ರತಿ ವರ್ಷ ₹ 1,200 ಕೋಟಿಯನ್ನು ನಾವೇ ಗಳಿಸುತ್ತಿದ್ದೇವೆ’ ಎಂದರು.
‘ಪ್ರಧಾನಿ ಮೋದಿ ಅವರ ವಿದೇಶ ಪ್ರವಾದ ಬಗ್ಗೆ ಟೀಕೆಗಳಿವೆ. ಆದರೆ, ಅವರ ಪ್ರವಾಸದಿಂದ ವಿಜ್ಞಾನ ಕ್ಷೇತ್ರಕ್ಕೆ ಆದ ಅನುಕೂಲವನ್ನು ಊಹಿಸಲೂ ಸಾಧ್ಯವಿಲ್ಲ’ ಎಂದರು.
‘ಡಿ. 19ರಂದು ‘ಜಿಎಸ್ಎಲ್ವಿ’ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಾದ ಇದರ ಕಾರ್ಯಕ್ಷಮತೆ ಶ್ರೇಷ್ಠಮಟ್ಟದ್ದು’ ಎಂದರು.
‘ಜಿನೇವಾ ಒಪ್ಪಂದ’ ಪ್ರಕಾರ; ಯಾವುದೇ ದೇಶವು ಬೇರೆ ಗ್ರಹಗಳ ಮೇಲೆ ಕ್ರಮಿಸಿದ ಜಾಗ ಹಾಗೂ ಕಂಡುಕೊಂಡ ಸಂಪನ್ಮೂಲ ಆಯಾ ದೇಶಕ್ಕೇ ಸೇರುತ್ತದೆ. ಭವಿಷ್ಯದಲ್ಲಿ ಭೂಮಿಯ ಸಂಪನ್ಮೂಲ ಖಾಲಿಯಾಗಲಿದೆ. ಆಗ ನಾವು ಖಾಲಿ ಕೈಯಲ್ಲಿ ನಿಲ್ಲುವಂತಾಗಬಾರದು. ಈ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಯಾನ ಮಹತ್ವ ಪಡೆದಿದೆ. ಇಸ್ರೊ ವೆಚ್ಚ ಮಾಡುವ ಪ್ರತಿ ರೂಪಾಯಿಯ ಪ್ರಯೋಜನ ಕೂಡ ನಾಗರಿಕರಿಗೆ ಮರಳುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.