ADVERTISEMENT

‘ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ: ಚಿ.ನಾ.ರಾಮು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 22:34 IST
Last Updated 6 ಡಿಸೆಂಬರ್ 2021, 22:34 IST
ನಾಗರಾಜ ಬಳ್ಳೇಕೆರೆ, ಮುನಿರಾಜು, ಮಹಾಮಾಯ ನನ್ನರಿಂಗ್‌ ಬುದ್ಧ ವಿಹಾರದ ಭಿಕ್ಷುಣಿ ಧಮ್ಮನಯನ ಹಾಗೂ ಚಿ.ನಾ.ರಾಮು ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ 
ನಾಗರಾಜ ಬಳ್ಳೇಕೆರೆ, ಮುನಿರಾಜು, ಮಹಾಮಾಯ ನನ್ನರಿಂಗ್‌ ಬುದ್ಧ ವಿಹಾರದ ಭಿಕ್ಷುಣಿ ಧಮ್ಮನಯನ ಹಾಗೂ ಚಿ.ನಾ.ರಾಮು ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ಈ ವಿಚಾರದಲ್ಲಿ ಸರ್ಕಾರದ ಕಣ್ಣು ತೆರೆಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು’ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಚಿ.ನಾ.ರಾಮು ತಿಳಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 65ನೇ ಪರಿನಿರ್ವಾಣ ದಿನದ ಅಂಗವಾಗಿ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಸೋಮವಾರ ಮಾತನಾಡಿದರು.

‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಆಗ ಪರಿಶಿಷ್ಟ ಜಾತಿ ಪಟ್ಟಿಗೆಆರು ಜಾತಿಗಳನ್ನಷ್ಟೇ ಸೇರ್ಪಡೆ ಮಾಡಿದ್ದರು. ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಜನಪ್ರತಿನಿಧಿಗಳು ಇದಕ್ಕೆ ಇನ್ನೂ 95 ಜಾತಿಗಳನ್ನು ಸೇರಿಸಿದ್ದಾರೆ. 101 ಜಾತಿಗಳಿಗೆ ಶೇ 15ರಷ್ಟು ಮೀಸಲಾತಿ ಸಾಲುವುದಿಲ್ಲ’ ಎಂದರು.

ADVERTISEMENT

‘ಅಂಬೇಡ್ಕರ್‌ ಮತ್ತು ಪ್ರಸ್ತುತತೆ’ ಕುರಿತು ಮಾತನಾಡಿದಕ್ರಿಯಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ ಬಳ್ಳೇಕೆರೆ, ‘ಕೊಳೆಗೇರಿ ನಿವಾಸಿಗಳು, ಗ್ರಾಮೀಣ ಭಾಗದ ಬಡವರ ಬದುಕು ಈಗಲೂ ಶೋಚನೀಯವಾಗಿದೆ.ತಳ ಸಮುದಾಯದಲ್ಲೇ ಬಲಿಷ್ಠರಾಗಿರುವ ಕೆಲವರಷ್ಟೇ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ದಲಿತರು ವಾಸಿಸುವ ಮನೆ ಹಾಗೂ ಉಡುಗೆ ತೊಡುಗೆಯಲ್ಲಷ್ಟೇ ಬದಲಾವಣೆಯಾಗಿದೆ. ಅವರ ಆರ್ಥಿಕ ಸ್ಥಿತಿ ಇಂದಿಗೂ ದಯನೀಯವಾಗಿದೆ’ ಎಂದರು.

‘ಸಮುದಾಯದ ಹೆಸರು ಮುಂದಿಟ್ಟುಕೊಂಡು ಮೀಸಲಾತಿಯ ಲಾಭ ಪಡೆದು ಶಾಸಕ ಹಾಗೂ ಸಂಸದರಾಗಿ ಆಯ್ಕೆಯಾದವರು ಸ್ವಯಂ ಏಳಿಗೆಯತ್ತ ಮಾತ್ರ ಚಿತ್ತ ಹರಿಸುತ್ತಿದ್ದಾರೆ. ಸಮುದಾಯದ ಹಿತ ಕಡೆಗಣಿಸುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.