ಬೆಂಗಳೂರು: ‘ಕನ್ನಡ ಕಾಯಕ ವರ್ಷಾಚರಣೆ ಅಂಗವಾಗಿ ಇನ್ನು ಮುಂದೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಎಲ್ಲಾ ಆದೇಶ, ಸುತ್ತೋಲೆ, ಮಾರ್ಗಸೂಚಿ ಹಾಗೂ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು’ ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕ ಚಂದ್ರ ಆದೇಶಿಸಿದ್ದಾರೆ.
‘ಇಲಾಖೆಯಲ್ಲಿರುವ ಅನ್ಯ ಭಾಷಿಕ ಸಿಬ್ಬಂದಿಗೆ ಕನ್ನಡ ಕಲಿಸಲು ಹಾಗೂ ಅವರು ಕನ್ನಡ ಭಾಷೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸುವಂತಾಗಲು ಅನುಕೂಲಕರ ವಾತಾವರಣ ಸೃಷ್ಟಿಸಬೇಕು. ಆಡಳಿತದ ಎಲ್ಲಾ ಹಂತಗಳಲ್ಲಿಯೂ ಕನ್ನಡದಲ್ಲಿಯೇ ವ್ಯವಹರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಟೆಲಿ ವೈದ್ಯಕೀಯ ಸೇವೆಯಲ್ಲಿ ರೋಗಿಗಳ ಔಷಧೋಪಚಾರದ ಬಗ್ಗೆ ಕನ್ನಡದಲ್ಲೇ ಮಾಹಿತಿ ಒದಗಿಸಬೇಕು. ರೋಗಿಗಳೊಂದಿಗೆ ಕನ್ನಡದಲ್ಲೇ ವ್ಯವಹರಿಸಲು ಅನುಕೂಲ ಮಾಡಿಕೊಡಲು ಹೊರ ರಾಜ್ಯದ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಥಳೀಯ ಅಧಿಕಾರಿಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಲು ಮುಂದಾಗಬೇಕು’ ಎಂದು ತಿಳಿಸಿದ್ದಾರೆ.
‘ಇಲಾಖೆಯ ಜಾಲತಾಣಗಳಲ್ಲಿನ ಎಲ್ಲಾ ಮಾಹಿತಿಯೂ ಕನ್ನಡದಲ್ಲೇ ಲಭ್ಯವಾಗುವಂತೆ ಕ್ರಮ ವಹಿಸಬೇಕು. ವೈದ್ಯಕೀಯ ಕ್ಷೇತ್ರದ ಮಾಹಿತಿಗಳನ್ನೊಳಗೊಂಡ ಕನ್ನಡ ಮಾಸ ಪತ್ರಿಕೆ ಪ್ರಕಟಿಸಬೇಕು’ ಎಂದೂ ಅವರು ತಾಕೀತು ಮಾಡಿದ್ದಾರೆ.
‘ರಾಜ್ಯದ ಎಲ್ಲಾ ಕ್ಷೇತ್ರ, ಇಲಾಖೆ ಹಾಗೂ ಹಂತಗಳಲ್ಲಿಯೂ ಕನ್ನಡ ಭಾಷೆ ಬಳಸಿ, ಭಾಷಾ ಬಳಕೆಯ ವ್ಯಾಪ್ತಿ ವಿಸ್ತರಿಸಬೇಕು. ಆ ಮೂಲಕ ಕನ್ನಡವನ್ನು ಸಾರ್ವಭೌಮಗೊಳಿಸಲು ಸಹಕರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪತ್ರದ ಮೂಲಕ ಕೋರಿದ್ದಾರೆ. ಎಲ್ಲಾ ವೈದ್ಯರು, ರೋಗಿಗಳಿಗೆ ಅರ್ಥವಾಗುವ ಭಾಷೆಯಲ್ಲೇ ಅವರಿಗಿರುವ ಕಾಯಿಲೆ, ತೆಗೆದುಕೊಳ್ಳಬೇಕಾದ ಔಷಧ ಹಾಗೂ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದೂ ಮನವಿ ಮಾಡಿದ್ದಾರೆ. ಹೀಗಾಗಿ ಇಲಾಖೆಯಲ್ಲಿ ಕನ್ನಡ ಬಳಕೆ ಉತ್ತೇಜಿಸಲು ಸಂಸ್ಥೆಗಳ ಮುಖ್ಯಸ್ಥರು, ಮೇಲ್ವಿಚಾರಣಾ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.