ಬೆಂಗಳೂರು: ವಿದ್ಯಾರ್ಥಿಗಳ ಕೊರತೆಯ ಕಾರಣ ಕಳೆದ ಐದು ವರ್ಷಗಳಲ್ಲಿ ರಾಜ್ಯದ 15 ಕಾಲೇಜುಗಳು ಸಿವಿಲ್ ಎಂಜಿನಿಯರಿಂಗ್ ವಿಭಾಗವನ್ನು ಮುಚ್ಚಿವೆ.
ಬೆಳಗಾವಿಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಹಿತಿಯಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ರಾಜ್ಯದ ನಾಲ್ಕು ಕಾಲೇಜುಗಳು ಸಿವಿಲ್ ಎಂಜಿನಿಯರಿಂಗ್ ವಿಭಾಗವನ್ನು ಮುಚ್ಚಿವೆ. ವಿದ್ಯಾರ್ಥಿಗಳ ಬೇಡಿಕೆ ಪರಿಗಣಿಸಿ ಆ ಸೀಟುಗಳನ್ನು ‘ಕಂಪ್ಯೂಟರ್ ಸೈನ್ಸ್’ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಕೋವಿಡ್ ಸಂಕಷ್ಟ ಆರಂಭವಾದ ನಂತರ ಸಿವಿಲ್ ಕೋರ್ಸ್ಗಳಿಗೆ ಬೇಡಿಕೆ ತಗ್ಗಿತ್ತು. ಸಿವಿಲ್ ಎಂಜಿನಿಯರಿಂಗ್ ವೃತ್ತಿಯು ಕ್ಷೇತ್ರಕಾರ್ಯವನ್ನು ಹೆಚ್ಚಾಗಿ ಅವಲಂಬಿಸಿರುವ ಕಾರಣ ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದರು. ಮನೆಯಲ್ಲೇ ಕುಳಿತು ಕೆಲಸ ಮಾಡಬಹುದಾಗಿದ್ದ ಕಂಪ್ಯೂಟರ್ ಸೈನ್ಸ್ ಮತ್ತಿತರ ಕೋರ್ಸ್ಗಳತ್ತ ಚಿತ್ತ ಹರಿಸಿದ್ದರು. ವಿದ್ಯಾರ್ಥಿಗಳ ಕೊರತೆಯಿಂದಾಗಿ 2020–21ರಲ್ಲಿ ಮೊದಲ ಬಾರಿ ನಾಲ್ಕು ಕಾಲೇಜುಗಳು ಸಿವಿಲ್ ಎಂಜಿನಿಯರಿಂಗ್ ವಿಭಾಗವನ್ನು ಮುಚ್ಚಿದ್ದವು. ನಂತರವೂ ಅದೇ ಪ್ರವೃತ್ತಿ ಮುಂದುವರಿದು ಪ್ರತಿ ವರ್ಷವೂ ಮೂರ್ನಾಲ್ಕು ಕಾಲೇಜುಗಳಲ್ಲಿ ಕೋರ್ಸ್ ಸ್ಥಗಿತಗೊಳಿಸಲಾಗುತ್ತಿದೆ. ಕೆಲವು ಕಾಲೇಜುಗಳು ಸೀಟುಗಳ ಸಂಖ್ಯೆ ಕಡಿತಗೊಳಿಸಿವೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದರು.
‘ಬೇಡಿಕೆಗಳಿಗೆ ತಕ್ಕಂತೆ ಕೆಲ ಕೋರ್ಸ್ಗಳು ಮಹತ್ವ ಕಳೆದುಕೊಳ್ಳುವುದು, ಕೆಲ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚುವುದು ಸಹಜ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂತಹ ಏರಿಳಿತ ಇರುತ್ತದೆ. ನಿರ್ಮಾಣ ಕ್ಷೇತ್ರ ಸೇರಿದಂತೆ ಉದ್ಯಮದ ಬೆಳವಣಿಗೆಗೆ ಪೂರಕವಾಗಿ ಭವಿಷ್ಯದಲ್ಲಿ ಮತ್ತೆ ಬೇಡಿಕೆ ಬರಬಹುದು’ ಎನ್ನುತ್ತಾರೆ ವಿಟಿಯು ಕುಲಪತಿ ವಿದ್ಯಾಶಂಕರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.