ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರ ಈವರೆಗೆ ಬರಗಾಲದಿಂದ ರಾಜ್ಯದಲ್ಲಿ ಉಂಟಾಗಿರುವ ಬೆಳೆ ಹಾನಿ ಮತ್ತು ನಷ್ಟ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಬಾಯಿಗೆ ಬಂದಂತೆ ಪರಿಹಾರ ಕೇಳಿದರೆ ಹೇಗೆ ಕೊಡುತ್ತಾರೆ? ಅದಕ್ಕೆ ದಾಖಲೆ ಏನಾದರೂ ಬೇಕಲ್ಲ’ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಅವರು ಪ್ರಶ್ನಿಸಿದರು.
ರಮೇಶ್ ಜಿಗಜಿಣಗಿ ಅವರ ನೇತೃತ್ವದ ಬಿಜೆಪಿ ಮುಖಂಡರ ತಂಡ ಸೋಮವಾರ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಬರ ಅಧ್ಯಯನ ನಡೆಸಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ನೀಡುವ ವರದಿ ಆಧರಿಸಿ ಕೇಂದ್ರ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡಲಿದೆ. ರಾಜ್ಯ ಸರ್ಕಾರದವರು ದಾಖಲೆ ಕೊಟ್ಟು ₹10 ಸಾವಿರ ಕೋಟಿ ಕೇಳಲಿ. ಯಾರಾದರೂ ಬೇಡ ಎನ್ನುತ್ತಾರಾ? ವರದಿ ಕೊಡದೆ ಪರಿಹಾರ ಕೊಡಿ ಎಂದರೆ ಹೇಗೆ? ಪರಿಹಾರ ಬಿಡುಗಡೆಗೆ ಅಂಕಿಸಂಖ್ಯೆಗಳು ಬೇಡವೆ’ ಎಂದು ಕೇಳಿದರು.
ರಮೇಶ್ ಜಿಗಜಿಣಗಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು, ‘ರಾಜ್ಯ ಸರ್ಕಾರ ಬೆಳೆ ಹಾನಿ, ನಷ್ಟ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಬಹಳ ದಿನಗಳಾಗಿವೆ. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರಿಗೆ ಮಾಹಿತಿ ಕೊರತೆಯಿಂದ ಆ ಬಗ್ಗೆ ಮಾಹಿತಿ ಇಲ್ಲ ಎನಿಸುತ್ತದೆ. ಮಾಹಿತಿ ಕೊರತೆ ಇದ್ದವರು ಹೇಗೆ ಸಮೀಕ್ಷೆ ಮಾಡುತ್ತಾರೋ ಗೊತ್ತಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.