ADVERTISEMENT

‘ಹುಬ್ಬಳ್ಳಿಯಲ್ಲಿ ಮಂಡಳಿ ಸಭೆ ನಡೆಸಿದ್ದರು

ದೆಹಲಿಗರ ಕೈಯಲ್ಲಿದ್ದ ರೈಲ್ವೆ ಇಲಾಖೆಯನ್ನು ಸುಪರ್ದಿಗೆ ಪಡೆದ ಕನ್ನಡಿಗ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 20:11 IST
Last Updated 25 ನವೆಂಬರ್ 2018, 20:11 IST
ದೆಹಲಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ‘ಪೊಲೀಸನ ಮಗಳು’ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಂದೋಡಿ ಲೀಲಾ, ಪ್ರೊ.ಐ.ಜಿ.ಸನದಿ ಅವರ ಜೊತೆ ಸಿ.ಕೆ.ಜಾಫರ್‌ ಷರೀಫ್‌ (ಸಂಗ್ರಹ ಚಿತ್ರ)
ದೆಹಲಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ‘ಪೊಲೀಸನ ಮಗಳು’ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಂದೋಡಿ ಲೀಲಾ, ಪ್ರೊ.ಐ.ಜಿ.ಸನದಿ ಅವರ ಜೊತೆ ಸಿ.ಕೆ.ಜಾಫರ್‌ ಷರೀಫ್‌ (ಸಂಗ್ರಹ ಚಿತ್ರ)   

ಹುಬ್ಬಳ್ಳಿ: ‘ರಾಜಧಾನಿ ದೆಹಲಿಯನ್ನು ಬಿಟ್ಟು ದೇಶದ ಬೇರೆಲ್ಲೂ ನಡೆಯದಿದ್ದ ರೈಲ್ವೆ ಮಂಡಳಿ ಸಭೆಯನ್ನು ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಶ್ರೇಯ ಸಿ.ಕೆ.ಜಾಫರ್‌ ಷರೀಫ್‌ ಅವರಿಗೆ ಸಲ್ಲುತ್ತದೆ’ ಎಂದು ಮಾಜಿ ಸಂಸದ ಪ್ರೊ.ಐ.ಜಿ.ಸನದಿ ನೆನಪಿಸಿಕೊಂಡರು.

ರೈಲ್ವೆ ಸಚಿವರಾಗಿದ್ದಾಗ ಷರೀಫ್‌ರು ಉತ್ತರ ಕರ್ನಾಟಕಕ್ಕೆ ನೀಡಿರುವ ಕೊಡುಗೆಗಳನ್ನು ‘ಪ್ರಜಾವಾಣಿ’ಯೊಂದಿಗೆ ಮೆಲುಕು ಹಾಕಿದ ಅವರು, ಹುಬ್ಬಳ್ಳಿಯಲ್ಲಿ ಅಂದು ನಡೆದ ರೈಲ್ವೆ ಮಂಡಳಿ ಸಭೆಯಲ್ಲಿ ಕರ್ನಾಟಕದ ಸಮಗ್ರ ರೈಲ್ವೆ ಯೋಜನೆಗಳ ಬಗ್ಗೆ ಷರೀಫ್‌ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.

ಮೀರಜ್‌–ಬೆಂಗಳೂರು ನಡುವೆ ಸಂಚರಿಸುತ್ತಿದ್ದ ‘ಕಿತ್ತೂರು’ ಏಕ್ಸ್‌ಪ್ರೆಸ್‌ ರೈಲಿಗೆ ‘ಕಿತ್ತೂರು ರಾಣಿ ಚನ್ನಮ್ಮ’ ಎಂದು ಮರುನಾಮಕರಣ ಮಾಡಿದ್ದು ಅವರ ಅವಧಿಯಲ್ಲಿಯೇ. ಜೊತೆಗೆ ಮೀರಜ್‌–ಬೆಂಗಳೂರು ಮೀಟರ್‌ ಗೇಜ್‌ ಅನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸುಲು ಅವರು ಆದ್ಯತೆ ನೀಡಿದರು ಎಂದು ಅವರು ಸ್ಮರಿಸಿದರು.

ADVERTISEMENT

‘ಹುಬ್ಬಳ್ಳಿ–ಧಾರವಾಡದಿಂದ ಬೆಂಗಳೂರಿಗೆ ತೆರಳಲು ನೇರ ರೈಲ್ವೆ ಮಾರ್ಗವಿರಲಿಲ್ಲ. ಗುಂಟೂರು ಮಾರ್ಗವಾಗಿ ಸುತ್ತುಬಳಸಿ ಹೋಗಬೇಕಿತ್ತು. ಷರೀಫ್‌ ರೈಲ್ವೆ ಸಚಿವರಾಗಿದ್ದಾಗ ಚಿತ್ರದುರ್ಗ–ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ನೇರ ರೈಲು ಮಾರ್ಗ ಆರಂಭವಾಯಿತು. ಇದರಿಂದ ಈ ಭಾಗದ ಜನರಿಗೆ ರಾಜಧಾನಿಗೆ ತೆರಳಲು ಅನುಕೂಲವಾಯಿತು. ದೆಹಲಿಗರ ಮುಷ್ಟಿಯಲ್ಲಿದ್ದ ರೈಲ್ವೆ ಇಲಾಖೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಏಕೈಕ ಕನ್ನಡಿಗ ಸಿ.ಕೆ.ಜಾಫರ್‌ ಷರೀಫ್‌ ಅವರಾಗಿದ್ದರು’ ಎಂದರು.

**

ಪಾಪು ಮುನ್ನುಡಿ

ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಸಿ.ಕೆ.ಜಾಫರ್‌ ಷರೀಫ್‌ ಜೀವನ ಕಥನ ಕುರಿತು ಬರೆದಿರುವ ‘ಸಾಧಕನ ಬದುಕು’ ಕೃತಿಗೆ ಮುನ್ನುಡಿ ಬರೆದಿರುವುದನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ‘ಕಡುಬಡತನದಲ್ಲಿ ಬೆಳೆದ ಷರೀಫ್‌ ಒಬ್ಬ ನಿಷ್ಠುರ ರಾಜಕಾರಣಿ, ಅಪ್ಪಟ ರಾಷ್ಟ್ರೀಯವಾದಿ ಆಗಿದ್ದರು. ರಾಷ್ಟ್ರರಾಜಕಾರಣದಲ್ಲಿ ಗುರುತಿಸಿಕೊಂಡ ಅಪರೂಪದ ಕನ್ನಡಿಗ’ ಎಂದರು.

‘ಕರ್ನಾಟಕದ ಸಮಗ್ರ ರೈಲ್ವೆ ಜಾಲವನ್ನು ಮೀಟರ್‌ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಪರಿವರ್ತಿಸುವ ಅದ್ಭುತ ಕೆಲಸ ಕೈಗೆತ್ತಿಕೊಂಡು, ಅದು ಆಗುವಂತೆ ಹಸಿರು ದೀಪ ತೋರಿಸಿದ್ದಾರೆ. ರಾಜ್ಯವು ಅವರನ್ನು ನಿರಂತರ ನೆನೆಯಬೇಕು’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.