ಬೆಂಗಳೂರು: ಬರದಿಂದ ತತ್ತರಿಸಿರುವ ಜನರಿಗೆ ಮೋಡ ಬಿತ್ತನೆ ಮಾಡಿ ಮಳೆ ತರಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಿದ್ಧತೆ ನಡೆಸಿದ್ದು, ಜುಲೈ 18 ಅಥವಾ 19ರಂದು ಮೈಸೂರಿನಿಂದ ಆರಂಭವಾಗಲಿದೆ.
ನಂತರದ ಒಂದು ವಾರದಲ್ಲಿ ಹುಬ್ಬಳ್ಳಿ ಭಾಗದಲ್ಲಿ ಪ್ರಾರಂಭವಾಗಲಿದೆ. ಮೋಡಗಳ ಲಭ್ಯತೆಯನ್ನು ಆಧರಿಸಿ 90 ದಿನಗಳ ಕಾಲ ಈ ಕೆಲಸ ನಡೆಯಲಿದೆ.
ಈ ವರ್ಷ ₹45 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು,‘ಕ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್’ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆಯು ಎರಡು ವಿಮಾನಗಳನ್ನು ತರಿಸಿದ್ದು, ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ. ಅಲ್ಲಿಯೇ ರ್ಯಾಕ್ ಅಳವಡಿಕೆ ಮಾಡಲಾಗುತ್ತಿದ್ದು, ಕಸ್ಟಮ್ಸ್ ಇಲಾಖೆಯಿಂದ ಅನುಮತಿ ಸಿಕ್ಕ ತಕ್ಷಣ ಬೆಂಗಳೂರಿನ ಜಕ್ಕೂರು ವಾಯುನೆಲೆಗೆ ಬರಲಿವೆ.
ಮೋಡ ಬಿತ್ತನೆಗೆ ಪೂರಕವಾಗಿ ಮಾಹಿತಿ ಪಡೆದುಕೊಳ್ಳಲು ರಾಜ್ಯದ ಮೂರು ಕಡೆಗಳಲ್ಲಿ ರಡಾರ್ ಅಳವಡಿಕೆ ಕೆಲಸವೂ ಮುಂದುವರಿದಿದೆ.
ಮೋಡ ತೇವಾಂಶ ಆಧರಿಸಿ ಬಿತ್ತನೆ
ಮೋಡದ ತೇವಾಂಶ ಆಧರಿಸಿ ಮೋಡ ಬಿತ್ತನೆ ಮಾಡಲಾಗುತ್ತದೆ. ಎಲ್ಲ ಮೋಡಗಳಲ್ಲೂ ತೇವಾಂಶ ಇರುತ್ತದೆ. ಆದರೆ ಯಾವ ಪ್ರಮಾಣದ ತೇವಾಂಶ ಇದೆ, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವುದೇ ಎಂಬುದರ ಮೇಲೆ ಈ ಕೆಲಸ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಎಂಜಿನಿಯರ್ ಪ್ರಕಾಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.