ADVERTISEMENT

ಮೀನುಗಾರಿಕೆ: ಸಹಾಯಧನ ವಿಸ್ತರಣೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 20:05 IST
Last Updated 16 ಅಕ್ಟೋಬರ್ 2022, 20:05 IST
   

ಬೆಂಗಳೂರು: ‘ಕೇಬಲ್ ನೆಟ್ ಮೂಲಕ ಮೀನು ಸಾಕಾಣಿಕೆ ಮಾಡುವ ರಾಜ್ಯದ 300 ಸಂಘಗಳಿಗೆ ₹ 3 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಈ ಮಿತಿಯನ್ನು 1,000 ಸಂಘಗಳಿಗೆ ವಿಸ್ತರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೀನುಗಾರಿಕೆ ಇಲಾಖೆ ಹಾಗೂ ಫ್ರೀಡಂ ಆ್ಯಪ್‌ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಒಳನಾಡು ಮೀನು ಉತ್ಪಾದಕರ ಸಮಾವೇಶ' ಉದ್ಘಾಟಿಸಿ ಮಾತನಾಡಿದ ಅವರು, ‘ಮೀನು ಸಸ್ಯಾಹಾರಿ. ಮೀನು ತಿನ್ನುವವರು ಮಾತ್ರ ಮಾಂಸಾಹಾರಿಗಳು. ಮೀನಿನ ಆಹಾರಕ್ಕೆ ಹೆಚ್ಚು ಬೇಡಿಕೆ ಇದ್ದು, ಮೀನುಗಾರಿಕೆ ಬೃಹತ್ ಉದ್ಯಮವಾಗಿ ಬೆಳೆದಿದೆ. ಮೀನು ರಫ್ತಿನಲ್ಲಿ ಆಂಧ್ರಪ್ರದೇಶ ಮುಂಚೂಣಿಯಲ್ಲಿದ್ದು, ಕರ್ನಾಟಕವೂ ಮೀನುಗಾರಿಕೆ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕಿದೆ’ ಎಂದರು. ‘ರಾಜ್ಯದ 5,000 ಮೀನುಗಾರರ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಮಂಜೂರಾತಿ ನೀಡಲಾಗಿದೆ. ಜನವರಿಯೊಳಗೆ ಮನೆಗಳು ನಿರ್ಮಾಣವಾದರೆ, ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು’ ಎಂದು ಹೇಳಿದರು.

1 ಲಕ್ಷ ಮಕ್ಕಳಿಗೆ ವಿದ್ಯಾನಿಧಿ: ‘ರೈತರ ಮಕ್ಕಳಿಗೆ ನೀಡುತ್ತಿರುವ ವಿದ್ಯಾನಿಧಿ ಯೋಜನೆಯನ್ನು ಮೀನುಗಾರರ ಮಕ್ಕಳಿಗೂ ವಿಸ್ತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಮೀನುಗಾರರ 1 ಲಕ್ಷ ಮಕ್ಕಳಿಗೆ ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಿಸಲು ₹ 50 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.