ಬೆಳಗಾವಿ: ‘ಪ್ರಕೃತಿ ವಿರೋಧಿ ಕೃತ್ಯಗಳ ಕಾರಣ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಇದರಿಂದ ನೈಸರ್ಗಿಕ ದುರಂತಗಳು ಸಂಭವಿಸುತ್ತಿವೆ. ಇದನ್ನು ತಡೆಯಲು ಒಂದಾಗಿ ಹೋರಾಡಬೇಕಾದ ಅಗತ್ಯವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,ರಾಷ್ಟ್ರೀಯ ಜಿಯಾಗ್ರಾಫರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ 44ನೇ ಇಂಡಿಯನ್ ಜಿಯಾಗ್ರಫಿ ಕಾಂಗ್ರೆಸ್ನ ಮೂರು ದಿನಗಳ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಕೃತಿ ವಿಕೋಪ ತಡೆಯಲು ಸಾಧ್ಯವಿಲ್ಲ. ಆದರೆ, ಅವುಗಳ ಮುನ್ಸೂಚನೆ ಪಡೆದು ಹಾನಿ ತಡೆಯಬಹುದು. ಈ ದೃಷ್ಟಿಯಲ್ಲಿ
ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಭೂಮಿಯ ತಾಪಮಾನ ಹೆಚ್ಚುತ್ತಿದೆ. ಇವುಗಳನ್ನು ತಡೆಯಲು ವನ ಬೆಳೆಸುವಂಥ ಕೆಲಸಗಳನ್ನು ಸಾಮೂಹಿಕವಾಗಿ ಮಾಡಬೇಕಾಗಿದೆ’ ಎಂದೂ ಅವರು ಹೇಳಿದರು.
ಆರ್ಸಿಯು ಕುಲಪತಿ ಪ್ರೊ.ರಾಮಚಂದ್ರ ಗೌಡ ಮಾತನಾಡಿ, ‘ಭೂಗೋಳ ವಿಜ್ಞಾನ ವಿಷಯವು ರಾಜ್ಯದ ಕೆಲವೇ ಕಾಲೇಜುಗಳಲ್ಲಿ ಇದೆ. ಇದರ ಮಹತ್ವವನ್ನು ಇನ್ನಷ್ಟು ಸಾರಬೇಕಿದೆ. ಪ್ರತಿಯೊಂದು ಕಾಲೇಜಿನಲ್ಲಿಯೂ ಭೂಗೋಳ ವಿಜ್ಞಾನ ಓದಲು ಪ್ರೇರೇಪಣೆ ನೀಡುವ ಅಗತ್ಯವಿದೆ’ ಎಂದರು.
ಸಚಿವರಾದ ಸಿ.ಸಿ.ಪಾಟೀಲ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕ ಬಿ.ಎಸ್. ಯಡಿಯೂರಪ್ಪ, ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನ್ಯಾಷನಲ್ ರೇನ್ಫೆಡ್ ಏರಿಯಾ ಅಥಾರಿಟಿಯ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಅಶೋಕ ದಳವಾಯಿ ಹಾಗೂ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆ ಮೇಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.