ADVERTISEMENT

ಸಚಿವ ಸಂಪುಟ ವಿಸ್ತರಣೆ: ಲಿಂಗಾಯತ, ಒಕ್ಕಲಿಗರದ್ದೇ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 13:49 IST
Last Updated 13 ಜನವರಿ 2021, 13:49 IST
ದೊಡ್ಡ ಪರದೆಯಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಿದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು
ದೊಡ್ಡ ಪರದೆಯಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಿದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು   

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಿಂದ ಲಿಂಗಾಯತ ಸಚಿವರ ಸಂಖ್ಯೆ 9 ರಿಂದ 11, ಒಕ್ಕಲಿಗ ಸಚಿವರ ಸಂಖ್ಯೆ 5 ರಿಂದ 7 ಕ್ಕೇರಿದೆ. ಕುರುಬ ಸಚಿವರ ಪ್ರಾತಿನಿಧ್ಯ 2 ರಿಂದ 4 ಕ್ಕೇರಿದೆ. ಪರಿಶಿಷ್ಟರ ಸಂಖ್ಯೆ 2 ರಿಂದ 4 ಕ್ಕೇರಿದೆ.

ಉಮೇಶ ಕತ್ತಿ, ಮುರುಗೇಶ ನಿರಾಣಿ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್‌, ಸಿ.ಪಿ.ಯೋಗೇಶ್ವರ್, ಎಸ್‌.ಅಂಗಾರ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಜಾತಿವಾರು, ಪ್ರಾದೇಶಿಕ ಸಮತೋಲನ ಕಾಪಾಡುವ ಮತ್ತು ಉತ್ಸಾಹಿ ಯುವ ಶಾಸಕರಿಗೆ ಈ ವಿಸ್ತರಣೆಯಲ್ಲಿ ಮನ್ನಣೆ ನೀಡಿಲ್ಲ ಎಂಬ ವ್ಯಾಖ್ಯಾನ ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ.

ಪ್ರಬಲ ಖಾತೆಗಳ ಮೇಲೆ ಕಣ್ಣು!

ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಉಮೇಶ ಕತ್ತಿ, ಮುರುಗೇಶ ನಿರಾಣಿ ಮತ್ತು ಅರವಿಂದ ಲಿಂಬಾವಳಿ ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದು, ಕೆಲವು ಸಚಿವರ ಖಾತೆಗಳಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ಇದೆ.

ಕೆಲವು ಹಿರಿಯ ಸಚಿವರು ಖಾತೆ ಬದಲಾವಣೆಗಾಗಿ ಮುಖ್ಯಮಂತ್ರಿಯವರಿಗೆ ಕೋರಿಕೆ ಸಲ್ಲಿಸಿದ್ದು, ಕೆಲವು ಸಚಿವರ ಖಾತೆಗಳು ಬದಲಾಗಬಹುದು ಎಂದು ಮೂಲಗಳು ಹೇಳಿವೆ.

ಸಂಪುಟಕ್ಕೆ ಸೇರ್ಪಡೆಗೊಂಡ ಕತ್ತಿ ಅವರಿಗೆ ಪ್ರವಾಸೋದ್ಯಮ, ನಿರಾಣಿಗೆ ಇಂಧನ, ಅರವಿಂದ್‌ಗೆ ಬೆಂಗಳೂರು ಅಭಿವೃದ್ದಿ, ಎಂಟಿಬಿ ನಾಗರಾಜ್‌ಗೆ ಹಿಂದುಳಿದ ವರ್ಗಗಳ ಕಲ್ಯಾಣ, ಆರ್‌.ಶಂಕರ್‌ಗೆ ಅಬಕಾರಿ, ಅಂಗಾರ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಹಂಚಿಕೆ ಮಾಡಬಹುದು ಎಂಬ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಓದು–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.