ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳು ಕುಂಠಿತಗೊಂಡಿದ್ದು, ಇವುಗಳಿಗೆ ಉತ್ತೇಜನ ನೀಡುವ ಮೂಲಕ ಉದ್ಯೋಗಾವಕಾಶ ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕೌಶಲ ಸಂಪರ್ಕ ವೇದಿಕೆ’ ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಅವರು, ‘ವಲಸೆ ಕಾರ್ಮಿಕರಿಗೆ ಇದು ವರದಾನವಾಗಲಿದೆ. ಅವರಿಗೂ ತರಬೇತಿ ನೀಡಲಾಗುವುದು’ ಎಂದರು.
ಎಲ್ಲೆಲ್ಲಿ ಉದ್ಯೋಗಾವಕಾಶಗಳು ಲಭ್ಯ ಇವೆ, ಯಾರಿಗೆ ಕೆಲಸದ ಅಗತ್ಯವಿದೆ ಎಂಬ ಮಾಹಿತಿ ಈ ಪೋರ್ಟಲ್ನಲ್ಲಿ ಸಿಗುತ್ತದೆ. ಲಭ್ಯವಿರುವ ಉದ್ಯೋಗಗಳಿಗೆ ಅಗತ್ಯವಾದ ತರಬೇತಿ ನೀಡಿ, ಅಭ್ಯರ್ಥಿಗಳನ್ನು ಕಂಪನಿಗಳಿಗೆ ಕಳುಹಿಸಲಾಗುವುದು ಎಂದು ಹೇಳಿದರು.
ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ಖಚಿತವಾಗಿ ಕೆಲಸ ದೊರೆಯುತ್ತದೆ. ಅದೇ ರೀತಿ ಕಂಪನಿಗಳಿಗೂ ಈ ಸಂಪರ್ಕ ವೇದಿಕೆ ಮೂಲಕ ಉತ್ತಮ ಗುಣಮಟ್ಟದ ಕೌಶಲಪೂರ್ಣ ಮಾನವ ಸಂಪನ್ಮೂಲವೂ ದೊರೆಯುತ್ತದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಮಾಹಿತಿ, ಸಂಪರ್ಕದ ಸೇತುವೆ: ಕೌಶಲ ಸಂಪರ್ಕ ವೇದಿಕೆ ಪೋರ್ಟಲ್ ಬಗ್ಗೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಹಾಗೂ ಕೌಶಲಾಭಿವೃದ್ಧಿ ಸಚಿವರೂ ಆದ ಡಾ. ಅಶ್ವತ್ಥನಾರಾಯಣ, ರಾಜ್ಯದ ಯುವಜನರಿಗೆ ವರದಾನವಾಗಬಲ್ಲ ಈ ಪೋರ್ಟಲ್ನಿಂದ ನಿರುದ್ಯೋಗ ಸಮಸ್ಯೆ ಗಣನೀಯವಾಗಿ ನಿವಾರಣೆ ಆಗಲಿದೆ ಎಂದರು.
ಸರ್ಕಾರವು ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಅವರ ಬೇಡಿಕೆಗೆ ತಕ್ಕಂತೆ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದೆ. ರಾಜ್ಯದ ಪ್ರಗತಿಗೆ ಇದು ನಿರ್ಣಾಯಕ ಪಾತ್ರವಹಿಸಲಿದೆ ಎಂದು ಅವರು ಹೇಳಿದರು.
ಪೋರ್ಟಲ್ ವಿಳಾಸ: https://skillconnect.kaushalkar.com
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.