
ಬೆಂಗಳೂರು: ‘ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಅವರು ಸೇವಕರಾಗಿ ಉಳಿಯುವುದಿಲ್ಲ ಎಂದು ಮನುಸ್ಮೃತಿ ಹೇಳುತ್ತದೆ. ಮನುಸ್ಮೃತಿ ಪ್ರಕಾರ ನಡೆಯುವ ಬಿಜೆಪಿಯವರು ಇದೇ ಕಾರಣಕ್ಕೆ ‘ವಿಬಿ ಜಿ ರಾಮ್ ಜಿ’ ಕಾಯ್ದೆ ಜಾರಿ ಮಾಡಿದ್ದು, ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಈ ಕಾಯ್ದೆ ರದ್ದುಪಡಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ವಿಧಾನಸಭೆಯಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ನಿರ್ಣಯ ಮಂಡಿಸಿ ಅವರು ಮಾತನಾಡಿದರು. ಬಿಜೆಪಿ–ಜೆಡಿಎಸ್ ಸದಸ್ಯರು ಮುಖ್ಯಮಂತ್ರಿಯವರ ಮಾತಿಗೆ ಪದೇ ಪದೇ ಅಡ್ಡಿ ಪಡಿಸುತ್ತಲೇ ಇದ್ದರು.
‘ಮನುಸ್ಮೃತಿ ಪ್ರಕಾರ ನಡೆಯುವುದು ಆರ್ಎಸ್ಎಸ್. ಆರ್ಎಸ್ಎಸ್ನ ಮಾರ್ಗದರ್ಶನದಂತೆ ನಡೆಯುವವರು ಬಿಜೆಪಿಯವರು.ಮೇಲಿನವರನ್ನು ತೃಪ್ತಿ ಮಾಡಲು ಬಿಜೆಪಿಯವರು ಈ ನಿರ್ಣಯ ವಿರೋಧಿಸುತ್ತಿದ್ದಾರೆ. ದೆಹಲಿಯವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಆರ್ಎಸ್ಎಸ್ನವರು ಬರೆದುಕೊಟ್ಟಿದ್ದನ್ನು ತಂದು ಮಾತನಾಡುತ್ತಾರೆ’ ಎಂದು ಲೇವಡಿ ಮಾಡಿದರು.
ತಮ್ಮ ಬೇಡಿಕೆ ಮಂಡಿಸಿದ ಸಿದ್ದರಾಮಯ್ಯ, ‘2005ರಲ್ಲಿ ಯುಪಿಎ ಜಾರಿಗೆ ತಂದಿದ್ದ ನರೇಗಾದಿಂದ 21 ವರ್ಷದಲ್ಲಿ ಕೋಟ್ಯಂತರ ಮಂದಿಗೆ ಉದ್ಯೋಗ ಖಾತ್ರಿ ನೀಡಲಾಗಿತ್ತು. ಈ ಕಾಯ್ದೆ ರದ್ದುಪಡಿಸಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿಯಿಂದ ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತದೆ. ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗುತ್ತದೆ. ಕನಿಷ್ಠ ವೇತನದ ರಕ್ಷಣೆ ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ತಳ್ಳಲ್ಪಡುತ್ತಾರೆ. ದಲಿತ ಮತ್ತು ಆದಿವಾಸಿಗಳ ಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿಯಾಗುತ್ತದೆ. ಗ್ರಾಮೀಣಾಭಿವೃದ್ಧಿಗೆ, ಗ್ರಾಮೀಣ ಬದುಕಿಗೆ ಈ ಕಾಯ್ದೆ ಮಾರಕವಾಗುತ್ತದೆ’ ಎಂದು ಹೇಳಿದರು.
‘ಗ್ರಾಮೀಣ ಜನರ ಬದುಕುವ ಹಕ್ಕು ಉಳಿಸಲು ವಿ ಬಿಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ನರೇಗಾ ಯೋಜನೆ ಮರುಜಾರಿ ಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರು ಸ್ಥಾಪಿಸಬೇಕು, ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶದಾದ್ಯಂತ ಕನಿಷ್ಠ ₹ 400 ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.