ಬೆಂಗಳೂರು: ‘ರಾಜ್ಯದಲ್ಲಿ ಬಿಜೆಪಿ, ಆರೆಸ್ಸೆಸ್ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಕೋಮುದ್ವೇಷವನ್ನು ಹರಡುತ್ತಿವೆ. ಧರ್ಮಗಳ ಮಧ್ಯೆ ವೈಮನಸ್ಸು ಹುಟ್ಟು ಹಾಕುವ ಕಾರ್ಖಾನೆಗಳಂತಾಗಿವೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಕೋಮುದ್ವೇಷ ಹುಟ್ಟು ಹಾಕುತ್ತಿದೆ ಎಂಬ ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದರು.
‘ಎರಡು ದಶಕಗಳಿಂದ ದ್ವೇಷ ಭಾಷಣ ಹಾಗೂ ನಕಲಿ ಸುದ್ದಿ ಹಂಚುವುದನ್ನು ಬಿಜೆಪಿ ಬೆಂಬಲಿತ ಗುಂಪುಗಳು ಸಾಂಸ್ಥಿಕವಾಗಿ ಮಾಡುತ್ತಿವೆ. ಇದು ಕೇವಲ ಕರಾವಳಿ ಪ್ರದೇಶಕ್ಕೆ ಸೀಮಿತ ಆಗಿಲ್ಲ. ಈ ಸಂಘಟನೆಗಳು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಹಾಗೂ ಮಲೆನಾಡು ಪ್ರದೇಶಗಳನ್ನು ದ್ವೇಷ ಹುಟ್ಟು ಹಾಕುವ ಪ್ರಯೋಗಾಲಯಗಳನ್ನಾಗಿ ಮಾಡಿವೆ. ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ’ ಎಂದರು.
‘ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲೇಬೇಕಿದೆ. ಈ ಉದ್ದೇಶದಿಂದ ರಾಜ್ಯ ಸರ್ಕಾರ ಸದ್ಯದಲ್ಲಿ ಹೊಸ ಕಾಯ್ದೆ ಜಾರಿಗೆ ತರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.