ADVERTISEMENT

ಸಾಹಿತಿ ಭಗವಾನ್ ವಿರುದ್ಧ ಡಿಜಿಪಿಗೆ ದೂರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:33 IST
Last Updated 28 ಡಿಸೆಂಬರ್ 2018, 19:33 IST
   

ಬೆಂಗಳೂರು: ‘ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ಶ್ರೀರಾಮನ ಬಗ್ಗೆ ಅವಹೇಳನಾಕಾರಿ ಬರಹ ಪ್ರಕಟಿಸುವ ಮೂಲಕ ಹಿಂದೂ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಶುಕ್ರವಾರ ಪ್ರತ್ಯೇಕವಾಗಿ ದೂರುಗಳನ್ನು ಕೊಟ್ಟಿದ್ದಾರೆ.

ಡಿಜಿಪಿ ನೀಲಮಣಿ ಎನ್‌.ರಾಜು ಅವರನ್ನು ಭೇಟಿಯಾದ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್, ‘ಭಗವಾನ್ ಅವರು ಹಿಂದೂ ದೇವರುಗಳನ್ನು ನಿಂದಿಸುವುದೇ ತಮ್ಮ ಕಾಯಕ ಎಂಬಂತೆ ವರ್ತಿಸುತ್ತಿದ್ದಾರೆ. ಪದೇ ಪದೇ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು
ಆಗ್ರಹಿಸಿದ್ದಾರೆ.

‘ಶ್ರೀರಾಮ ಕೊಲೆಗಡುಕ, ಸೀತೆಗೆ ಕಳ್ಳಭಟ್ಟಿ ಕುಡಿಸುತ್ತಿದ್ದ, ಸ್ತ್ರೀಯರ ಜತೆ ಕುಡಿದು ನೃತ್ಯ ಮಾಡುತ್ತಿದ್ದ... ಎಂಬ ಸಾಲುಗಳನ್ನು ಭಗವಾನ್ ‘ರಾಮ ಮಂದಿರ ಏಕೆ ಬೇಡ?’ ಎಂಬ ಕೃತಿಯಲ್ಲಿ ಬರೆದಿದ್ದಾರೆ. ಅಲ್ಲದೆ, ಮಹಾತ್ಮ ಗಾಂಧಿ ಅವರನ್ನೂ ಮತಾಂಧ ಎಂದು ಕರೆದಿದ್ದಾರೆ. ಇದು ಗಾಂಧಿ ಅನುಯಾಯಿಗಳಿಗೂ ನೋವುಂಟು ಮಾಡಿದೆ’ ಎಂದು ಆರೋಪ ಮಾಡಿದ್ದಾರೆ.

ADVERTISEMENT

ಮತ್ತೊಂದೆಡೆ ಗಿರೀಶ್ ಭಾರದ್ವಾಜ್ ಹಾಗೂ ನಾಗೇಶ್ ಎಂಬುವರೂ, ‘ಭಗವಾನ್ ಒಬ್ಬ ಸ್ವಯಂಘೋಷಿತ ಸಾಹಿತಿ. ಕೋಮುಸಂಘರ್ಷ ಸೃಷ್ಟಿಸಲು ಹೊರಟಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿ ಕಬ್ಬನ್‌ಪಾರ್ಕ್‌ ಹಾಗೂ ವಿಧಾನಸೌಧ ಠಾಣೆಗಳಿಗೆ ದೂರು ಕೊಟ್ಟಿದ್ದಾರೆ. ಎಫ್‌ಐಆರ್ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.