ಶಿವಮೊಗ್ಗ: ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಸಂಸ್ಥೆಯ ಹೆಸರಿನಲ್ಲಿ ನಕಲಿ ನೇಮಕಾತಿಯ ಜಾಹೀರಾತು ನೀಡಲಾಗಿದೆ ಎಂದು ಆರೋಪಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಅರ್ಟಿಸಿ) ಸಿಬ್ಬಂದಿ ಜಿ.ಕೆ.ಮರಿಗೌಡ ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂನ ಸನ್ಮಾರ್ಗ ಮಾನವ ಸಂಪನ್ಮೂಲ ಏಜೆನ್ಸಿ ಹೆಸರಿನಲ್ಲಿ ನವೆಂಬರ್ 11ರಂದು ಪತ್ರಿಕೆಯಲ್ಲಿ ನೇಮಕಾತಿ ಬಗ್ಗೆ ಜಾಹೀರಾತು ನೀಡಲಾಗಿದೆ.
’ಕೆಎಸ್ಆರ್ಟಿಸಿ ಕೇಂದ್ರ ಕಚೇರಿ ಹಾಗೂ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು 650 ಚಾಲಕರು ಬೇಕಾಗಿದ್ದಾರೆ. ಕಾಯಂ ನೌಕರಿ ಇದಾಗಿದ್ದು, ಆರಂಭದಲ್ಲಿ ಪ್ರತಿಯೊಬ್ಬ ಆಕಾಂಕ್ಷಿಯೂ ₹25000 ತುಂಬಬೇಕು. ನಂತರ ಅದನ್ನು ವಾಪಸ್ ನೀಡಲಾಗುವುದು ಎಂದು ಜಾಹೀರಾತು ನೀಡಲಾಗಿದೆ. ಸಂಸ್ಥೆಯಿಂದ ಅಧಿಕೃತವಾಗಿ ಯಾವುದೇ ನೇಮಕಾತಿ ಆದೇಶ ಹೊರಡಿಸಿಲ್ಲ. ನೌಕರಿ ಅಮಿಷ ಒಡ್ಡಿ ಹಣ ಸಂಗ್ರಹಣೆ ಮಾಡಿ ವಂಚಿಸುವ ಉದ್ದೇಶದಿಂದ ಜಾಹೀರಾತು ನೀಡಲಾಗಿದೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ‘ ಎಂದು ಮರಿಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ದೊಡ್ಡಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.