ADVERTISEMENT

ಸಂಪೂರ್ಣ ಸಾಕ್ಷರ ರಾಜ್ಯ ಶೀಘ್ರ: ಸಚಿವ ನಾಗೇಶ್

‘ಪಢನಾ ಲಿಖನಾ’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 17:50 IST
Last Updated 14 ಸೆಪ್ಟೆಂಬರ್ 2021, 17:50 IST
ಬಿ.ಸಿ.ನಾಗೇಶ್
ಬಿ.ಸಿ.ನಾಗೇಶ್   

ಬೆಂಗಳೂರು: ‘ಕೇಂದ್ರ, ರಾಜ್ಯ ಸರ್ಕಾರದ ಲೋಕಶಿಕ್ಷಣ ನಿರ್ದೇಶನಾಲಯದ ಜೊತೆಗೆ ಶಿಕ್ಷಣ ಇಲಾಖೆಯ ವಿವಿಧ ವಿಭಾಗಗಳ ಸಂಯೋಜನೆಯೊಂದಿಗೆ, ಸರ್ಕಾರೇತರ ಸಂಸ್ಥೆಗಳು, ಸ್ವಯಂಸೇವಕರ ನೆರವಿನಲ್ಲಿ ಕರ್ನಾಟಕವನ್ನು ‘ಸಂಪೂರ್ಣ ಸಾಕ್ಷರ ನಾಡು’ ಆಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ ತಿಳಿಸಿದರು.

ಲೋಕಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ವತಿಯಿಂದ ಮಂಗಳವಾರ ನಡೆದ 55ನೇ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹ-2021ಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸಾಕ್ಷರತೆ ಕಾರ್ಯಕ್ರಮಗಳ ಯಶಸ್ಸಿಗೆ ಈ ವರ್ಷ ವಿಶೇಷ ಒತ್ತು ನೀಡಲಾಗುತ್ತಿದೆ. ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 120 ತಾಸುಗಳ ಅವಧಿಗೆ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಅನಕ್ಷರಸ್ಥರು ಹೆಚ್ಚಿರುವ ರಾಯಚೂರು, ಯಾದಗಿರಿ, ಕಲಬುರ್ಗಿ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ‘ಪಢನಾ, ಲಿಖನಾ’ (ಓದು, ಬರಹ) ಅಭಿಯಾನಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಸಚಿವರು ತಿಳಿಸಿದರು.

ADVERTISEMENT

‘ಬಾಳಿಗೆ ಬೆಳಕು’ ಮತ್ತು ‘ಬರೆಯೋಣ ಬನ್ನಿ’ ಅಭ್ಯಾಸ ಪುಸ್ತಕ ಬಿಡುಗಡೆ, ಪರಿಷ್ಕೃತ ಬೋಧನಾ ಸಾಮಗ್ರಿಗಳ ಅರ್ಪಣೆ ಮತ್ತು ಕೇಂದ್ರ ಸರ್ಕಾರದ ‘ಪಢನಾ ಲಿಖನಾ’ (ಓದು, ಬರಹ) ಅಭಿಯಾನ ಹಾಗೂ 2021-22ನೇ ಸಾಲಿನ ಜಿಲ್ಲಾ ವಲಯದ ಸಾಕ್ಷರತಾ ಕಾರ್ಯಕ್ರಮಗಳಿಗೆ ಸಚಿವರು ಚಾಲನೆ ನೀಡಿದರು.

‘1–5 ತರಗತಿ: ಕೋವಿಡ್ ಪರಿಸ್ಥಿತಿ ಪರಿಶೀಲಿಸಿ ತೀರ್ಮಾನ’

ಶಾಲೆಗಳಲ್ಲಿ 1ರಿಂದ 5ರವರೆಗಿನ ತರಗತಿಗಳನ್ನು ಪುನರಾರಂಭಿಸುವ ಕುರಿತು ಕೇಳಿದ ಪ್ರಶ್ನೆಗೆ, ‘ಕೋವಿಡ್ ಮೂರನೇ ಅಲೆ ಈವರೆಗೆ ಹೆಚ್ಚಾಗಿ ಕಂಡುಬಂದಿಲ್ಲ. ಆದರೂ, ತಜ್ಞರ ಸಮಿತಿ ಈ ಕುರಿತು ಗಂಭೀರವಾಗಿ ಅಧ್ಯಯನ ನಡೆಸುತ್ತಿದೆ. 6ರಿಂದ 8ನೇ ತರಗತಿಗಳು ಕೆಲವು ದಿನಗಳ ಹಿಂದೆಯಷ್ಟೆ ಆರಂಭವಾಗಿದೆ. ಮಕ್ಕಳ ವರ್ತನೆ, ಕೋವಿಡ್ ನಿಯಮಗಳ ಪಾಲನೆ ಕುರಿತು ನಿಗಾ ವಹಿಸಲಾಗಿದೆ. ಕೆಲ‌ವು ದಿನಗಳ‌ ಬಳಿಕ ಸಭೆ ನಡೆಸಿ, ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ನಾಗೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.