ಬೆಂಗಳೂರು: ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕ ಆರ್.ಎನ್. ಶೆಟ್ಟಿ ಅವರಿಗೆ ವಿವಿಧ ಕ್ಷೇತ್ರದ ಗಣ್ಯರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದರು.
ನಗರದ ಚನ್ನಸಂದ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಏರ್ಪಡಿಸಲಾದ ಶ್ರದ್ಧಾಂಜಲಿ ಸಭೆಯಲ್ಲಿ ಕುಟುಂಬದ ಸದಸ್ಯರು, ಒಡನಾಡಿಗಳು, ಸ್ನೇಹಿತರು ಹಾಗೂ ಸಂಬಂಧಿಗಳು ಪಾಲ್ಗೊಂಡಿದ್ದರು. ವೈದ್ಯರಾದ ಡಾ. ತಿಮ್ಮಪ್ಪ ಭಟ್, ಡಾ. ಸುದರ್ಶನ್ ಬಲ್ಲಾಳ್, ಡಾ. ಪಾಲ್ ಕ್ರಿಷ್ಟೊದಾಸ್, ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್, ಕೆ.ಎಲ್.ಇ ಸಂಸ್ಥೆಗಳ ಅಧ್ಯಕ್ಷ ಪ್ರಭಾಕರ ಕೋರೆ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಸೇರಿದಂತೆ ಹಲವರು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಪ್ರಭಾಕರ ಕೋರೆ, ‘ಆರ್.ಎನ್. ಶೆಟ್ಟಿ ಅವರು ಹುಬ್ಬಳ್ಳಿ ಬಿಟ್ಟು ಬೆಂಗಳೂರಿಗೆ ಬಂದ ಬಳಿಕ ಉತ್ತರ ಕರ್ನಾಟಕದ ಭಾಗಕ್ಕೆ ಒಂದು ಕೊರತೆ ಉಂಟಾಗಿತ್ತು. ಅವರು ಹುಬ್ಬಳ್ಳಿಯಲ್ಲಿಯೇ ಇದ್ದಿದ್ದರೆ ಆ ಭಾಗದ ಜನತೆಗೆ ಹೆಚ್ಚು ಲಾಭವಾಗುತ್ತಿತ್ತು’ ಎಂದರು.
ಶಂಕರ್ ಬಿದರಿ ಮಾತನಾಡಿ, ‘ರಾಮಕೃಷ್ಣ ಹೆಗಡೆ ಅವರು ಆರ್.ಎನ್. ಶೆಟ್ಟಿ ಅವರನ್ನು ನನಗೆ ಮೊದಲು ಪರಿಚಯಿಸಿದರು. ಅವರೊಂದಿಗೆ ನಿರಂತರ ಒಡನಾಟ ಹೊಂದಿದ್ದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.