ಬಾಗಲಕೋಟೆ: ರಾಜ್ಯದಲ್ಲಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿಗೆ ಒಳಪಡಿಸಲು ಆಗ್ರಹಿಸಿ ಡಿಸೆಂಬರ್ 29ರಂದು ನಗರದಲ್ಲಿ ಬೆಳಗಾವಿ ವಿಭಾಗ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಇಲ್ಲಿನ ಕಾಳಿದಾಸ ಮೈದಾನದಲ್ಲಿ ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ವಾಹನಗಳ ಪಾರ್ಕಿಂಗ್ಗೆ ಅಲ್ಲಿಯೇ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜದ ಮುಖಂಡ ಎಂ.ಎಲ್.ಶಾಂತಗಿರಿ ಹೇಳಿದರು.
ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದು ಎರಡೂವರೆ ದಶಕಗಳ ಹಿಂದಿನ ಬೇಡಿಕೆ. ಈ ಬಾರಿ ನಿರ್ಣಾಯಕ ಹೋರಾಟಕ್ಕೆ ಸಮಾಜ ಮುಂದಡಿ ಇಟ್ಟಿದೆ. ಆ ನಿಟ್ಟಿನಲ್ಲಿಪಕ್ಷಾತೀತವಾಗಿ ಸಮಾವೇಶ ಸಂಘಟಿಸಿ ಸಮುದಾಯವನ್ನು ಜಾಗೃತಿಗೊಳಿಸಲಿದ್ದೇವೆಎಂದರು.
ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ ಹಾಗೂ ಗದಗ ಜಿಲ್ಲೆಗಳಿಂದಲೂ ಸಮುದಾಯದವರು ಸಮಾವೇಶಕ್ಕೆ ಬರಲಿದ್ದಾರೆ.ಕೋವಿಡ್–19 ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮಗಳ ನಡುವೆ ಸಮಾವೇಶ ಸಂಘಟಿಸಿದ್ದೇವೆ.
ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಸೂಚಿಸಿದ್ದೇವೆ. ಸಮಾವೇಶದ ಸ್ಥಳದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸುರಕ್ಷಿತ ಅಂತದಲ್ಲಿ ಕುರ್ಚಿಗಳನ್ನು ಜೋಡಿಸಲಾಗಿದೆ ಎಂದರು.
ಸಮಾವೇಶದ ಸಾನ್ನಿಧ್ಯ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ. ಸಚಿವರಾದ ಕೆ.ಎಸ್.ಈಶ್ವರಪ್ಪ, ಬೈರತಿ ಬಸವರಾಜ, ಶಾಸಕರಾದ ಎಚ್.ವಿಶ್ವನಾಥ, ಎಂ.ಟಿ.ಬಿ.ನಾಗರಾಜ, ಮುಖಂಡರಾದ ಎಚ್.ಎಂ.ರೇವಣ್ಣ, ಆರ್.ಶಂಕರ್, ಕೆ.ಇ.ಶಾಂತೇಶ, ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಮುಕುಡಪ್ಪ ಹಾಗೂ ನಾಲ್ಕು ವಿಭಾಗಗಳ ವ್ಯಾಪ್ತಿಯ ಸಮಾಜದ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ಕಾಶಿನಾಥ ಹುಡೇದ, ಶಶಿ ಉದಗಟ್ಟಿ, ದೊಡ್ಡಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯ ಅಸೆಂಗಪ್ಪ ನಕ್ಕರಗುಂದಿ, ಸಂಗಣ್ಣ ಹಂಡಿ, ಎ.ಬಿ.ಜಾಲಿಹಾಳ, ರವಿ ಒಡ್ಡೋಡಗಿ, ಮಲ್ಲು ದ್ಯಾವಣ್ಣವರ, ಮಳಿಯಪ್ಪ ಗೋಳಬಾಳ, ಶಿವು ಹನುಮಕ್ಕನವರ, ಮುತ್ತು ಕುರುಬರ, ಸಿದ್ದು ದೇವಗೋಳ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.