ADVERTISEMENT

ಅಕ್ರಮಗಳ ತನಿಖೆಯಾದರೆ ಇಡೀ ಸರ್ಕಾರವೇ ಜೈಲು ಪಾಲಾಗಲಿದೆ: ಕಾಂಗ್ರೆಸ್‌ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2022, 13:51 IST
Last Updated 15 ಸೆಪ್ಟೆಂಬರ್ 2022, 13:51 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಅಕ್ರಮಗಳ ತನಿಖೆಯಾದರೆ ಇಡೀ ಸರ್ಕಾರವೇ ಜೈಲು ಪಾಲಾಗಲಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ‘40 ಪರ್ಸೆಂಟ್‌ ಸರ್ಕಾರದ ಅಕ್ರಮಗಳ ತನಿಖೆಯಾದರೆ ಇಡೀ ಸರ್ಕಾರವೇ ಜೈಲು ಪಾಲಾಗಲಿದೆ. ಪಿಎಸ್‌ಐ ಹಗರಣ, ಎಮ್‌ಎಸ್‌ಐಎಲ್‌ ಹಗರಣ, ಗಂಗಾ ಕಲ್ಯಾಣ ಹಗರಣ ಇವೆಲ್ಲವೂ ಮೊದಲು ನಿರಾಕರಿಸಿ ನಂತರ ತನಿಖೆ ವಹಿಸಿದ ಪ್ರಕರಣಗಳು. ಬಸವರಾಜ ಬೊಮ್ಮಾಯಿ ಅವರೇ, ನಮ್ಮ ಆರೋಪಗಳಲ್ಲಿ ಸತ್ಯವಿರುವುದು ಅರ್ಥ ಆಗಿದೆಯಲ್ಲವೇ? ಮತ್ಯಾಕೆ ತಡ ಎಲ್ಲ ಅಕ್ರಮಗಳನ್ನೂ ನ್ಯಾಯಾಂಗ ತನಿಖೆಗೆ ವಹಿಸಿ’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಪಿಎಸ್‌ಐ ನೇಮಕಾತಿಯ ಅಕ್ರಮವನ್ನೂ ನಿರಾಕರಿಸಿತ್ತು ಬಿಜೆಪಿ, ಕೊನೆಗೆ ತನಿಖೆಗೆ ವಹಿಸಲೇಬೇಕಾಯ್ತು. ಗಂಗಾಕಲ್ಯಾಣ ಯೋಜನೆಯ ಅಕ್ರಮವನ್ನೂ ನಿರಾಕರಿಸಿತ್ತು, ಈಗ ತನಿಖೆಗೆ ವಹಿಸಿದ್ದಾರೆ ಸಿಎಂ. ಭ್ರಷ್ಟಾಚಾರಕ್ಕೆ ಅನುವು ಮಾಡಲೆಂದೇ ನಿಯಮ ಬದಲಿಸಿದ ಸಮಾಜ ಕಲ್ಯಾಣ ಸಚಿವರ ಲೋಪಕ್ಕೆ ಯಾವ ಕ್ರಮ ಕೈಗೊಳ್ಳುವಿರಿ ಬಸವರಾಜ ಬೊಮ್ಮಾಯಿ ಅವರೇ’ ಎಂದು ಪ್ರಶ್ನೆ ಮಾಡಿದೆ.

ADVERTISEMENT

‘ಗಂಗಾ ಕಲ್ಯಾಣ ಯೋಜನೆಯ ಅಕ್ರಮವನ್ನು ಸಿಎಂ ಒಪ್ಪಿದ್ದಾರೆ. ಇಷ್ಟು ದಿನ ನಿರ್ಲಕ್ಷಿಸಿದ್ದೇಕೆ? ಕಳೆದ 3 ವರ್ಷದಿಂದ ಸರ್ಕಾರ ಏನು ಮಾಡ್ತಿತ್ತು? ದಲಿತ ಹಿಂದುಳಿದವರಿಗೆ 3 ವರ್ಷದಿಂದ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದ್ದೇಕೆ? ಇದಕ್ಕೆ ಹೊಣೆ ಯಾರು? ಫಲಾನುಭವಿಗಳಿಗೆ ಬೋರ್‌ವೆಲ್ ಸಿಗದಿರಲು ಸರ್ಕಾರದ ಭ್ರಷ್ಟಾಚಾರ, ಸಿಎಂ ನಿರ್ಲಕ್ಷ್ಯವೇ ಕಾರಣ’ ಎಂದು ಕಾಂಗ್ರೆಸ್‌ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.