ಬೆಂಗಳೂರು: ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೇಲುಗೈ ಆಗುತ್ತದೆ ಎಂಬ ಭಯದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಹೊಂದಾಣಿಕೆಯ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ಮುಂದೆ ನೀವು ಸಿಎಂ ಆಗಲು ನಾವು ಸಹಕರಿಸುತ್ತೇವೆ' ಎಂದು ಖರ್ಗೆ ಅವರಿಗೆ ಜೆಡಿಎಸ್ ಹೇಳಿದ್ದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಬರಸಿಡಿಲು ಬಡಿದಂತಾಗಿದೆ. 2013 ರಲ್ಲಿ ದಲಿತ ನಾಯಕ ಸಿಎಂ ಆಗುವುದನ್ನು ತಪ್ಪಿಸಿದ ಕಾಂಗ್ರೆಸ್ 2023 ಕ್ಕೂ ಅದೇ ತಂತ್ರ ಅನುಸರಿಸುತ್ತಿದೆ. ದಲಿತ ನಾಯಕರೆಂದರೆ ಏಕೆ ಇಷ್ಟು ಅಸಹನೆ?' ಎಂದು ಪ್ರಶ್ನಿಸಿದೆ.
‘ದಲಿತ ನಾಯಕ ಖರ್ಗೆ ಅವರ ಮೇಲುಗೈ ಆಗುತ್ತದೆ ಎಂಬ ಭಯದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಹೊಂದಾಣಿಕೆಯ ನಾಟಕ ಮಾಡುತ್ತಿದ್ದಾರೆ. ದಲಿತ ನಾಯಕನೋರ್ವ ಸಿಎಂ ಆಗುತ್ತಾರೆ ಎನ್ನುವ ಭಯ ನಿಮ್ಮಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಿತೆ?’ ಎಂದು ಬಿಜೆಪಿ ಕೇಳಿದೆ.
‘ನಮ್ಮದು ದಲಿತಪರ ಪಕ್ಷ ಎನ್ನುವ ಕಾಂಗ್ರೆಸ್, ವಾಸ್ತವದಲ್ಲಿ ದಲಿತ ಸಮುದಾಯವನ್ನು ಮೇಲೇರಲು ಬಿಡುವುದೇ ಇಲ್ಲ. ಡಿಸಿಎಂ ಆಗಲಿದ್ದ ಪರಮೇಶ್ವರ ಅವರನ್ನು ಸೋಲಿಸಿದರು. ನಂತರ ಡಿಸಿಎಂ ಸ್ಥಾನದಿಂದಲೂ ಕಿತ್ತೆಸೆದರು. ಈಗ ಇವರ ದೃಷ್ಟಿ ಖರ್ಗೆ ಮೇಲೆ. ದಲಿತರನ್ನು ಸಿಎಂ ಮಾಡುವುದಿಲ್ಲ ಎಂದು ದಲಿತ ವಿರೋಧಿ ಕಾಂಗ್ರೆಸ್ ಪಣ ತೊಟ್ಟಿದೆಯೇ?' ಎಂದು ಟ್ವೀಟಿಸಿದೆ.
‘ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮೇಲೆ ಮತಾಂಧರು ದಾಳಿ ನಡೆಸಿದಾಗ ಕೈ ನಾಯಕರು ಕೈಕಟ್ಟಿ ಕುಳಿತಿದ್ದರು. ಮತಾಂಧರನ್ನು ಓಲೈಸಲು ದಲಿತರ ಮೇಲಿನ ದಾಳಿಯನ್ನೂ ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತದೆ’ ಎಂದು ತಿಳಿಸಿದೆ.
‘2013ರಲ್ಲಿ ಪರಮೇಶ್ವರ ಅವರನ್ನು ಸೋಲಿಸಲು ಸಿದ್ದರಾಮಯ್ಯ ಪಣ ತೊಟ್ಟರು. 2023ರಲ್ಲಿ ಖರ್ಗೆ ಕಟ್ಟಿಹಾಕಲು ಸಿದ್ದರಾಮಯ್ಯ ಹಾಗೂ ಡಿಕೆಶಿ ಪಣತೊಟ್ಟಿದ್ದಾರೆ. ಒಬ್ಬ ದಲಿತ ನಾಯಕನನ್ನು ಹಿಮ್ಮೆಟ್ಟಿಸಲು ಎಷ್ಟೊಂದು ಉತ್ಸಾಹ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.