ಹೊಸಪೇಟೆ (ವಿಜಯನಗರ): ‘ಸಾಹಿತಿಗಳಿಗೆ ಜೀವ ಬೆದರಿಕೆಯ ಪತ್ರ ಬರೆಯಲಾಗಿದೆ. ಆದರೆ, ಅವರ ಕೂದಲು ಕೊಂಕಾದರೂ ಕಾಂಗ್ರೆಸ್ ಸುಮ್ಮನಿರಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಎಚ್ಚರಿಸಿದರು.
‘ಈಗಾಗಲೇ ಡಾ.ಎಂ.ಎಂ. ಕಲಬುರಗಿ, ಪನ್ಸಾರೆ, ಗೌರಿ ಸೇರಿದಂತೆ ಕೆಲವರ ಹತ್ಯೆ ಮಾಡಲಾಗಿದೆ. ಧ್ವನಿ ಅಡಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ದೇಶದ ಏಕತೆ ಛಿದ್ರವಾಗಲು ಬಿಡುವುದಿಲ್ಲ. ದೇಶಕ್ಕಾಗಿ ಹೋರಾಟ ನಡೆಸಿದ ಪಕ್ಷ ನಮ್ಮದು. ಈಗ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗೆ ಕೆಲಸ ಮಾಡಲಾಗುವುದು’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದಾಗ ಭಯ ಪಡಿಸುವುದು ಸಹಜ. ಆದರೆ, ಯಾರು ಕೂಡ ಎದೆಗುಂದಬಾರದು. ಮರ ಕೋತಿ ಆಡುವ ಬಜರಂಗ ದಳದ ವ್ಯಕ್ತಿಯನ್ನು ರಾಜ್ಯದ ಗೃಹಸಚಿವರಾಗಿ ಮಾಡಿರುವುದು ದುರಂತ. ಸರಿಯಾದ ಮಾಹಿತಿ ಇಲ್ಲದೇ ಮಾತನಾಡುತ್ತಿದ್ದಾರೆ. ಪ್ರತಿಯೊಂದಕ್ಕೂ ಕೋಮು ಬಣ್ಣ ಕೊಡುತ್ತಿದ್ದಾರೆ. ಗೃಹಸಚಿವರ ಬಂಧನ, ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹೋರಾಟ ನಡೆಸಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.