ಮೈಸೂರು: ‘ಮೂರು ಶಾಪಗಳು ಹಾಗೂ ಅಧಿಕಾರದಲ್ಲಿದ್ದಾಗ ತೋರಿದ ದರ್ಪ, ಅಹಂಕಾರದಿಂದ ಕಾಂಗ್ರೆಸ್ ದೂಳೀಪಟವಾಗುತ್ತಿದೆ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ಬಿಜೆಪಿ ಆಯೋಜಿಸಿರುವ ‘ಜನ ಸೇವಕ್’ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಗಾಂಧೀಜಿ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷವು ಅವರ ವಿಚಾರಧಾರೆ, ಗ್ರಾಮ ಸ್ವರಾಜ್ಯವನ್ನು ಮರೆಯಿತು. ಮತ ಬೇಟೆಗಾಗಿ ಅಂಬೇಡ್ಕರ್ ಫೋಟೊ ಬಳಸುವ ಈ ಪಕ್ಷವು ಅವರು ಜೀವಂತವಾಗಿದ್ದಾಗ ಸರಿಯಾಗಿ ಗೌರವವನ್ನೇ ಕೊಡಲಿಲ್ಲ. ಹತ್ತಾರು ಚುನಾವಣೆಗಳಲ್ಲಿ ಗೋಮಾತೆಯ ಚಿಹ್ನೆ (ಹಸು ಹಾಗೂ ಕರು) ಅಡಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ, ಅದನ್ನು ಮರೆತು ಹಸು ಹಂತಕರಿಗೆ ಮಣೆ ನೀಡಿತು. ಗೋಮಾಂಸ ತಿನ್ನುವ ಹೇಳಿಕೆ ನೀಡಿ ದೇಶದ ಸಂಸ್ಕೃತಿಗೆ ಅವಮಾನ ಮಾಡುತ್ತಿದೆ’ ಎಂದರು.
‘ಹೀಗಾಗಿ, ಗಾಂಧಿ, ಅಂಬೇಡ್ಕರ್ ಹಾಗೂ ಗೋಹತ್ಯೆ ಶಾಪ ಕಾಂಗ್ರೆಸ್ ಪಕ್ಷವನ್ನು ತಟ್ಟಿದೆ. ಈಗ ಕಾಂಗ್ರೆಸ್ನಲ್ಲಿ ನಾಯಕತ್ವಕ್ಕಾಗಿ ಜಗಳ ನಡೆಯುತ್ತಿದೆ. ಸಿದ್ರಾಮಣ್ಣ ಟವೆಲ್ ಹಾಕಿದ್ದಾರೆ. ಅದನ್ನು ಎಳೆಯಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.