ಬೆಂಗಳೂರು: ‘ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ಕಟ್ಟಡವನ್ನು ನಿರ್ಮಿಸಿದ್ದು ಕಾಂಗ್ರೆಸ್ ಸರ್ಕಾರ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೇಸ್ನ ನೂತನ ಕ್ಯಾಂಪಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಬೇಸ್ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ. ಈ ಕಟ್ಟಡವನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿದ್ದು ನಮ್ಮ ಸರ್ಕಾರದ ಸಾಧನೆ. ಜ್ಞಾನಭಾರತಿ ಕ್ಯಾಂಪಸ್ನಲ್ಲಿನ ಕಟ್ಟಡದಲ್ಲಿ 2017ರ ಜೂನ್ನಲ್ಲಿ ಬಿ.ಎಸ್ಸಿ (ಹಾನರ್ಸ್) ಎಕನಾಮಿಕ್ಸ್ ತರಗತಿಗಳು ಆರಂಭವಾಗಿತ್ತು’ ಎಂದಿದ್ದಾರೆ.
‘ಐದು ವರ್ಷಗಳ ಹಿಂದೆ 2017ರ ಅ. 4ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬೆಂಗಳೂರಿಗೆ ಬಂದು ಬೇಸ್ ಉದ್ಘಾಟಿಸಿದ್ದು, ನಾನು ಮುಖ್ಯಮಂತ್ರಿಯಾಗಿದ್ದ ಕಾಲದ ಮಧುರ ಮತ್ತು ಸಾರ್ಥಕ ನೆನಪು. ವಿಶ್ವ ಕಂಡ ಅಪ್ರತಿಮ ಆರ್ಥಿಕ ತಜ್ಞ ಅಂಬೇಡ್ಕರ್ ಅವರ 125ನೇ ಹುಟ್ಟು ಹಬ್ಬದ ನೆನಪಿಗೆ ಸ್ಮಾರಕ ರೂಪದಲ್ಲಿ ಯೋಜನೆಯೊಂದನ್ನು ರೂಪಿಸಬೇಕೆಂಬ ನಮ್ಮ ಸರ್ಕಾರದ ಕನಸು ನನಸಾಗಿ ರೂಪುಗೊಂಡದ್ದು ಬೇಸ್’ ಎಂದಿದ್ದಾರೆ.
‘ಬೇಸ್ಗೆ 2017ರಲ್ಲಿಯೇ 43.45 ಎಕರೆ ಜಮೀನು ಮತ್ತು ಹೊಸ ಕಟ್ಟಡ ಸಹಿತ ಮೂಲಸೌಕರ್ಯ ನಿರ್ಮಾಣಕ್ಕೆ ₹ 350 ಕೋಟಿ ಮಂಜೂರು ಮಾಡಿದ್ದ ನಮ್ಮ ಸರ್ಕಾರ, ಬದ್ಧತೆಯಿಂದ ಈ ಯೋಜನೆ ಸಾಕಾರಗೊಳಿಸಿತ್ತು’ ಎಂದೂ ತಿಳಿಸಿದ್ದಾರೆ.
ಅಂಬೇಡ್ಕರ್ ಆಶಯಗಳಿಗೂ ಚಾಲನೆ ಸಿಗಲಿ: ‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಕಟ್ಟಡ ಉದ್ಘಾಟಿಸಿರುವ ಮೋದಿ, ತಮ್ಮ ಅವಧಿಯಲ್ಲಿ ವಿಷಪೂರಿತವಾಗಿ ಹೆಚ್ಚಾಗಿರುವ ಧಾರ್ಮಿಕ ದ್ವೇಷ, ಅಸಹನೆ, ಅಸಂವಿಧಾನಿಕ ವಾತಾವರಣವನ್ನು ನಿಯಂತ್ರಿಸುವ ಮೂಲಕ ಅಂಬೇಡ್ಕರ್ ಆಶಯಗಳಿಗೂ ಚಾಲನೆ ನೀಡಲಿ’ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.