ಬಳ್ಳಾರಿ: ’ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷದ್ದು 85 ಪರ್ಸೆಂಟ್ ಸರ್ಕಾರ‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟರು.
ಸಿರುಗುಪ್ಪದಲ್ಲಿ ಗುರುವಾರ ಸಂಜೆ ನಡೆದ ’ಜನ ಸಂಕಲ್ಪ ಯಾತ್ರೆ‘ಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ, ’ದಿಲ್ಲಿಯಿಂದ 100 ರೂಪಾಯಿ ಬಿಡುಗಡೆ ಮಾಡಿದರೆ ಹಳ್ಳಿಗೆ 15 ರೂಪಾಯಿ ಮಾತ್ರ ಬರುತಿತ್ತು. ಉಳಿದ 85 ರೂಪಾಯಿ ಸೋರಿಕೆ ಆಗುತಿತ್ತು. ಈ ಮಾತನ್ನು ನಾನು ಹೇಳುತ್ತಿಲ್ಲ. ದಿ. ರಾಜೀವ್ ಗಾಂಧಿ ಅವರೇ ಹೇಳಿದ್ದರು‘ ಎಂದರು.
’ರಾಜೀವ್ ಗಾಂಧಿ ಸತ್ಯವನ್ನೇ ಹೇಳಿದ್ದರು. ಆದರೆ, ಮೋದಿ 85 ರೂಪಾಯಿ ಸೋರಿಕೆಗೆ ಕಡಿವಾಣ ಹಾಕಿದ್ದಾರೆ. ಇಡೀ 100 ರೂಪಾಯಿ ಫಲಾನುಭವಿಗಳಿಗೆ ಸಿಗುವಂತೆ ನೇರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದಾರೆ‘ ಎಂದು ಹೇಳಿದರು.
’ನಮ್ಮದು 40 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡುತ್ತಿದ್ದಾರೆ. 85 ಪರ್ಸೆಂಟ್ ಹಣ ನುಂಗಿದವರು ನಮ್ಮ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕೇಂದ್ರದಲ್ಲಿ 10 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಭೂಮಿ, ಆಕಾಶ ಮತ್ತು ಪಾತಾಳದಲ್ಲೂ ಭ್ರಷ್ಟಾಚಾರ ಮಾಡಿದೆ ಎಂದು ಲೇವಡಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.