ADVERTISEMENT

ಅನರ್ಹತೆ ಪ್ರಶ್ನಿಸಿ ‘ಸುಪ್ರೀಂ’ಗೆ ಮೇಲ್ಮನವಿ

ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರರಿಂದ ಅರ್ಜಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:04 IST
Last Updated 1 ಆಗಸ್ಟ್ 2019, 19:04 IST
   

ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ವಿಧಾನಸಭೆಯ ಸ್ಪೀಕರ್‌ ಆಗಿದ್ದ ಕೆ.ಆರ್‌.ರಮೇಶ್‌ಕುಮಾರ್ ನೀಡಿರುವ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ 15 ಜನ ಶಾಸಕರು ಗುರುವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಅನರ್ಹಗೊಂಡಿರುವ ಕಾಂಗ್ರೆಸ್‌ನ ಪ್ರತಾಪಗೌಡ ಪಾಟೀಲ, ಬಿ.ಸಿ. ಪಾಟೀಲ, ಶಿವರಾಮ ಹೆಬ್ಬಾರ, ಎಸ್‌.ಟಿ. ಸೋಮಶೇಖರ್‌, ಬಿ.ಎ. ಬಸವರಾಜ್‌, ಮುನಿರತ್ನ, ಆನಂದ್‌ಸಿಂಗ್‌, ಸುಧಾಕರ್‌, ಎಂಟಿಬಿ ನಾಗರಾಜ್‌, ರೋಷನ್‌ ಬೇಗ್‌, ಶ್ರೀಮಂತ ಪಾಟೀಲ್, ಜೆಡಿಎಸ್‌ನ ಎಚ್‌.ವಿಶ್ವನಾಥ್‌, ಕೆ.ಗೋಪಾಲಯ್ಯ, ಕೆ.ಸಿ. ನಾರಾಯಣಗೌಡ ಹಾಗೂ ಪಕ್ಷೇತರರಾದ ಆರ್‌.ಶಂಕರ್‌ ಮೇಲ್ಮನವಿ ಸಲ್ಲಿಸಿದ್ದಾರೆ.

‘ನಮ್ಮನ್ನು ಅನರ್ಹಗೊಳಿಸಲು ಸ್ಪೀಕರ್ ಅನುಸರಿಸಿದ ಎಲ್ಲ ಅಗತ್ಯ ಕ್ರಮಗಳ ಬಗ್ಗೆ ಲಭ್ಯವಿರುವ ದಾಖಲೆಗಳನ್ನು ಅವಲೋಕಿಸಿ ಅನರ್ಹತೆ ಆದೇಶ ರದ್ದುಪಡಿಸಬೇಕು. ಮೊದಲೇ ನಾವು ನೀಡಿರುವ ರಾಜೀನಾಮೆ ತಿರಸ್ಕರಿಸಿರುವ ಸ್ಪೀಕರ್ ಕ್ರಮ ರದ್ದುಪಡಿಸಬೇಕು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ನೀಡಲಾದ ಆದೇಶವನ್ನು ಈಗಲೂ ಅನ್ವಯಿಸಿ ಆದೇಶ ಹೊರಡಿಸಬೇಕು’ ಎಂದು ಮನವಿ ಮಾಡಿಕೊಳ್ಳಲಾಗಿದೆ. ರಮೇಶ ಜಾರಕಿಹೊಳಿ ಹಾಗೂ ಮಹೇಶ್‌ ಕುಮಠಳ್ಳಿ ಅವರೂ ಅನರ್ಹತೆ ಪ್ರಶ್ನಿಸಿ ಕಳೆದ ಸೋಮವಾರ ಮೇಲ್ಮನವಿ ಸಲ್ಲಿಸಿದ್ದಾರೆ.

ADVERTISEMENT

ಸ್ಪೀಕರ್‌ ಆಗಿದ್ದ ಕೆ.ಆರ್‌.ರಮೇಶ್‌ಕುಮಾರ್‌, ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಹಾಗೂ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ‘ಪಕ್ಷಾಂತರ ನಿಷೇಧ ಕಾಯ್ದೆ ಅಡಿ ನಂತರ ಸಲ್ಲಿಸಿದ ದೂರು ಆಧರಿಸಿ ಅನರ್ಹಗೊಳಿಸಿದ್ದಾರೆ’ ಎನ್ನುವುದು ಅರ್ಜಿದಾರರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.