ADVERTISEMENT

ರಾಜಾಹುಲಿ ಎನಿಸಿಕೊಳ್ಳುತ್ತಿದ್ದ ಬಿಎಸ್‌ವೈ ಆಡಳಿತದಲ್ಲಿ ಹುಲಿಯಾಗಿರಲಿಲ್ಲ: ದಿನೇಶ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 11:32 IST
Last Updated 26 ಜುಲೈ 2021, 11:32 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌    

ಬೆಂಗಳೂರು: ಹೊಗಳುಭಟರಿಂದ ರಾಜಾಹುಲಿ ಎಂದು ಕರೆಸಿಕೊಳ್ಳುತ್ತಿದ್ದ ಬಿ.ಎಸ್‌ ಯಡಿಯೂರಪ್ಪ ಅವರು, ತಮ್ಮ ಆಡಳಿತದಲ್ಲಿ ಯಾವತ್ತೂ ಹುಲಿಯಂತೆ ನಡೆದುಕೊಳ್ಳಲೇ ಇಲ್ಲ,‘ ಎಂದು ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಅಭಿಪ್ರಾಯಪಟ್ಟಿದ್ದಾರೆ.

ಬಿ.ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಲೇ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿ ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಾಹುಲಿ ಬಿರುದಾಂಕಿತ ಯಡಿಯೂರಪ್ಪ ಅವರು ವಾಸ್ತವವಾಗಿ ಕಾಗದದ ಹುಲಿಯಾಗಿಯೇ ಉಳಿದುಬಿಟ್ಟರು. 8 ಬಾರಿ ಬಜೆಟ್ ಮಂಡಿಸಿದ್ದರೂ, ಅವರ ಆಡಳಿತದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಯಿತು. ಯಡಿಯೂರಪ್ಪ ಆಡಳಿತ ವೈಫಲ್ಯದ ನೇರ ಪರಿಣಾಮವನ್ನು ಜನರು ಅನುಭವಿಸವಂತಾಯಿತು. ಕೋವಿಡ್‌ಅನ್ನು ಅತ್ಯಂತ ಕಳಪೆಯಾಗಿ ನಿಭಾಯಿಸಿದ ಕುಖ್ಯಾತಿ ಕೂಡ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

ತಮ್ಮ ಹೊಗಳುಭಟರಿಂದ 'ರಾಜಾಹುಲಿ' ಎಂದು ಕರೆಸಿಕೊಳ್ಳುತ್ತಿದ್ದ ಯಡಿಯೂರಪ್ಪ ಅವರು ತಮ್ಮ ಆಡಳಿತದಲ್ಲಿ ಯಾವತ್ತೂ ಹುಲಿಯಂತೆ ನಡೆದುಕೊಳ್ಳಲೇ ಇಲ್ಲ. ಕೇಂದ್ರದ ಆಜ್ಞೆಗಳನ್ನು ಶಿರ ಬಗ್ಗಿಸಿ ಪಾಲಿಸುವ ಆಜ್ಞಾನುವರ್ತಿಯಾದರೇ ಹೊರತು ತಲೆ ಎತ್ತಿ ನಡೆದವರೇ ಅಲ್ಲ. ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಪಾಲು ಕೇಳಲಿಲ್ಲ‌. ನೆರೆ ಪರಿಹಾರ ಕೇಳಲು ಧ್ವನಿಯೇ ಇರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಚೆಕ್‌‌ ಮೂಲಕ ಲಂಚ ಪಡೆದಿದ್ದು, ಡಿ-ನೋಟಿಫಿಕೇಶನ್ ಹಗರಣ, ಆಡಳಿತದಲ್ಲಿ ಕುಟುಂಬಸ್ಥರ ಹಸ್ತಕ್ಷೇಪ ಯಡಿಯೂರಪ್ಪ ಅವರ ‌ ಆಡಳಿತದ ಅತಿ ದೊಡ್ಡ ಮೈನಸ್ ಪಾಯಿಂಟ್. 'ಆಪರೇಷನ್ ಕಮಲ'ದ ಸೃಷ್ಟಿಕರ್ತರು ಕೂಡ ಯಡಿಯೂರಪ್ಪನವರೆ. ರಾಜಕೀಯ ಇತಿಹಾಸದಲ್ಲಿ ಯಡಿಯೂರಪ್ಪ 'ಆಪರೇಷನ್ ಕಮಲ' ಸೃಷ್ಟಿಸಿ ಸಂವಿಧಾನಕ್ಕೆ ಅಪಚಾರ ಎಸಗಿದ ಕಳಂಕಿತ ವ್ಯಕ್ತಿಯಾಗಿಯೇ ಉಳಿಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಯಡಿಯೂರಪ್ಪಉತ್ತಮ ಹೋರಾಟಗಾರರೇ ಹೊರತು ಉತ್ತಮ ಆಡಳಿತಗಾರರಾಗಿರಲಿಲ್ಲ. 4 ಬಾರಿ ರಾಜ್ಯದ ಸಿಎಂ ಆಗಿದ್ದರೂ ಜನ ನೆನಪಲ್ಲಿಟ್ಟುಕೊಳ್ಳುವಂತಹ ಆಡಳಿತ ನೀಡಲಿಲ್ಲ.‌ ಆಡಳಿತದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮಿತಿ ಮೀರಿ ಹೋಗಿತ್ತು. ವರ್ಗಾವಣೆ ದಂಧೆ, ಕಮೀಷನ್ ದಂಧೆಗಳಿಗೆ ಕಡಿವಾಣವಿರಲಿಲ್ಲ. ಕೊನೆಯ ಅವಧಿಯ 2 ವರ್ಷದಲ್ಲೂ ಬಿಎಸ್‌ವೈ ಸಾಧನೆ ಶೂನ್ಯವಾಗಿತ್ತು

ಸಿದ್ದಾಂತ ಹಾಗೂ ಪಕ್ಷ ಬೇರೆಯಾದರೂ ⁦ಯಡಿಯೂರಪ್ಪ⁩ ಹೋರಾಟದ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. 5ದಶಕಗಳ ಅವರ ರಾಜಕೀಯ ಜೀವನದ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಬಿಜೆಪಿಹೈಕಮಾಂಡ್ ಗೌರವಯುತ ವಿದಾಯಕ್ಕೆ ಅವಕಾಶ ನೀಡಬೇಕಿತ್ತು. ಬಿಎಸ್ವವೈಕಣ್ಣೀರು ಹಾಕಿದ್ದು ನೋಡಿದರೆ, ರಾಜೀನಾಮೆಯ ಹಿಂದೆ ಅಸಾಧ್ಯವಾದ ಒತ್ತಡವಿದ್ದದು ತಿಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.