ADVERTISEMENT

ಜನ್ಮದಿನ ಆಚರಿಸಿಕೊಳ್ಳದಿರಲು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 9:13 IST
Last Updated 19 ಜುಲೈ 2022, 9:13 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ಇದೇ 21ರಂದು 81ನೇ ವರ್ಷಕ್ಕೆ ಕಾಲಿರಿಸಲಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಂದು ದೆಹಲಿಯಲ್ಲಿ ಇರುವುದರಿಂದ ಕಲಬುರಗಿ ಅಥವಾ ಬೆಂಗಳೂರಿನಲ್ಲಿ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ’ನಿಮಗೆ ತಿಳಿದಿರುವಂತೆ, ಇದೆ ಜುಲೈ 21ಕ್ಕೆ ನನಗೆ 80 ವರ್ಷ ಪೂರ್ಣಗೊಳ್ಳಲಿದೆ. ನಾಡಿನ ಸರ್ವ ವರ್ಗಗಳ ಪ್ರೀತಿ ಹಾಗೂ ಸಹಕಾರದಿಂದ ರಾಜಕೀಯ ಸೇವೆಯಲ್ಲಿ 50 ವರ್ಷಗಳೂ ಪೂರ್ಣಗೊಂಡಿದೆ. ಈ ಅಪಾರ ಪ್ರಮಾಣದ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಸದಾ ನಿಮಗೆ ಚಿರಋಣಿಯಾಗಿರಲಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದ ಫಲವಾಗಿ ರಾಜ್ಯ ಸಭೆಯ ವಿರೋಧಪಕ್ಷದ ನಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಜುಲೈ 21ರಂದು ಸದನವು ಚಾಲ್ತಿಯಲ್ಲಿ ಇರುವುದರಿಂದ ಹಾಗೂ ಜುಲೈ 21ರಂದು ಈ ದೇಶದ ಕಾಂಗ್ರೆಸ್ ಪಕ್ಷದ ತ್ಯಾಗದ ಪ್ರತಿರೂಪವಾದ ಸೋನಿಯಾಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಹೆಸರಲ್ಲಿ ಕೇಂದ್ರ ಸರ್ಕಾರ ಅಗ್ನಿಪರೀಕ್ಷೆಗೆ ಒಳಪಡಿಸಿದೆ, ಇಂತಹ ಕಠಿಣ ಸಂದರ್ಭದಲ್ಲಿ ಅವರೊಂದಿಗೆ ಅವರ ಜೊತೆಯಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಅಂದು ಬೆಂಗಳೂರು ಅಥವಾ ಕಲಬುರಗಿಯಲ್ಲಿ ಭೇಟಿಗೆ ಲಭ್ಯವಿರುವುದಿಲ್ಲ. ಮುಂದಿನ ದಿನಗಳಲ್ಲಿ ಸದನ ಮುಗಿದ ನಂತರ ನಿಮ್ಮೆಲ್ಲರನ್ನು ಭೇಟಿ ಆಗಲಿದ್ದೇನೆ’ ಎಂದು ಹೇಳಿದ್ದಾರೆ.

‘ನನ್ನ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ನೀವೆಲ್ಲರೂ ಜೊತೆಗಾರರಾಗಿ ನನಗೆ ಶಕ್ತಿ ತುಂಬಿದ್ದೀರಿ, ನಾನು ಇಂದು ಯಾವುದೇ ಸ್ಥಾನದಲ್ಲಿದ್ದರೂ ಅದು ನಿಮ್ಮ ನಂಬಿಕೆ, ಪ್ರೀತಿ ಹಾಗೂ ಆಶೀರ್ವಾದದ ಫಲ. ನನ್ನ ಹುಟ್ಟುಹಬ್ಬ ಆಚರಿಸುವ ಬದಲಾಗಿ ಬುದ್ಧ–ಬಸವ–ಅಂಬೇಡ್ಕರ್ ತತ್ವಗಳನ್ನು ಹಾಗೂ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಎಲ್ಲರೂ ನಿರ್ವಹಿಸಬೇಕೆಂದು ಕೇಳಿಕೊಳ್ಳಲು ಇಚ್ಛಿಸುತ್ತೇನೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.