ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ (67) ಅವರು ಕೋವಿಡ್ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಗುರುವಾರ ನಿಧನರಾದರು.
ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ನಾರಾಯಣರಾವ್ ಅವರಿಗೆ ಆಗಸ್ಟ್ 31ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಆಪ್ತರ ಸಲಹೆಯ ಮೇರೆಗೆ ಸೆಪ್ಟೆಂಬರ್ 1ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಚೇತರಿಸಿಕೊಂಡಿದ್ದರು. ನಂತರ ರಾಜಕೀಯ ಮುಖಂಡರು ಹಾಗೂ ಗೆಳೆಯರಿಗೆ ಮೊಬೈಲ್ ಕರೆ ಮಾಡಿ ‘ನಾನು ಕ್ಷೇಮವಾಗಿದ್ದೇನೆ. ನನ್ನ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದ ನಿಮಗೆಲ್ಲರಿಗೂ ವಂದನೆಗಳು’ ಎಂದು ಹೇಳಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿತ್ತು.
ತದ ನಂತರದಲ್ಲಿ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ತೊಂದರೆ ಅನುಭವಿಸಿದ್ದರು. ಕಾಮಾಲೆ, ಅಧಿಕ ರಕ್ತದೊತ್ತಡದಿಂದ ಇನ್ನಷ್ಟು ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ವೈದ್ಯರು ಬಿ.ನಾರಾಯಣರಾವ್ ಅವರ ನಿಧನವನ್ನು ಗುರುವಾರ ಸಂಜೆ ದೃಢಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.