ADVERTISEMENT

‘ಅನೈತಿಕ ಶಿಶು’ ಸರ್ಕಾರ: ಚರ್ಚೆಗೆ ಅವಕಾಶ ಕೇಳಿದ ಕಾಂಗ್ರೆಸ್‌!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 19:36 IST
Last Updated 16 ಮಾರ್ಚ್ 2021, 19:36 IST
ವಿಧಾನ ಪರಿಷತ್‌–ಸಾಂದರ್ಭಿಕ ಚಿತ್ರ
ವಿಧಾನ ಪರಿಷತ್‌–ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಾವು ಏಕೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋದೆವು ಎಂಬುದನ್ನು ಒಂದು ಗಂಟೆ ಕಾಲ ಚರ್ಚೆ ಮಾಡಲು ಅವಕಾಶ ನೀಡಿದರೆ ಚರ್ಚಿಸಬಹುದು’ ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ ವಿಧಾನ ಪರಿಷತ್‌ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಉಲ್ಲೇಖಿಸಿ, ಸಾರ್ವಜನಿಕ ಮಹತ್ವದ ವಿಷಯವೆಂದು ನಿಯಮ 58ರ ಅಡಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗೆ ಕಾಂಗ್ರೆಸ್‌ ಪತ್ರ ನೀಡಿದೆ.

ಚಿಕ್ಕಬಳ್ಳಾಪುರದಲ್ಲಿ ಕಾನೂನುಬಾಹಿರ ಗಣಿಗಾರಿಕೆ ಕುರಿತು ಮಂಗಳವಾರ ನಡೆದ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ‘ಈ ಸರ್ಕಾರ ಅನೈತಿಕ ಶಿಶು. ವಿವಾಹೇತರ ಸಂಬಂಧದಿಂದ ಹುಟ್ಟಿದ್ದು. ನಮ್ಮಲ್ಲಿದ್ದವರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದರು. ನಮ್ಮವರನ್ನು ರಾಜೀನಾಮೆ ಕೊಡಿಸಿ ಚುನಾವಣೆಗೆ ನಿಲ್ಲಿಸಿದರು. ಸರ್ಕಾರ ರಚನೆಯ ವೇಳೆ ಲಿವಿಂಗ್ ಟುಗೆದರ್ ಇದ್ದರು’ ಎಂದು ಛೇಡಿಸಿದರು.

ಈ ವೇಳೆ ಮಾತನಾಡಿದ ಶ್ರೀಮಂತ ಪಾಟೀಲ, ‘ಈ ಬಗ್ಗೆ ಒಂದು ಗಂಟೆ ಚರ್ಚೆಗೆ ಅವಕಾಶ ನೀಡಿದರೆ ನಾವು ಏಕೆ ಹೋದೆವು ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದರು.

ADVERTISEMENT

ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ‘ಚರ್ಚೆಗೆ ಅವಕಾಶ ಕೊಡಿ. ಎಲ್ಲಾ ಚರ್ಚೆ ಆಗಲಿ’ ಎಂದು ಪಟ್ಟು ಹಿಡಿದರು.

ಕಾಂಗ್ರೆಸ್‌ನ ಎಂ. ನಾರಾಯಣಸ್ವಾಮಿ, ‘ಆಪರೇಷನ್ ಕಮಲ ನಡೆಯದಂತೆ ಶಾಸಕರನ್ನು ನೋಡಿಕೊಳ್ಳುವ ಜವಾಬ್ದಾರಿ ನನಗೆ ಕೊಟ್ಟಿದ್ದರು. ನಮ್ಮ ಶಾಸಕರೆಲ್ಲಾ ಹೋಟೆಲ್‌ನಲ್ಲಿ ಇದ್ದೆವು. ಈ ಶ್ರೀಮಂತ ಪಾಟೀಲ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿ ರಾತ್ರೋರಾತ್ರಿ ಓಡಿ ಹೋದರು’ ಎಂದರು.

ಆಗ ಬಿಜೆಪಿ ಮತ್ರ ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಜಟಾಪಟಿ ನಡೆಯಿತು.

ಬಳಿಕ ಚರ್ಚೆಗೆ ಅವಕಾಶ ಕೋರಿ ಸಭಾಪತಿಗೆ ನಾರಾಯಣ ಸ್ವಾಮಿ ಪತ್ರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.