ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಪ್ರಕ್ರಿಯೆಯೂ ಪ್ರಮಾಣಿಕವಾಗಿ ನಡೆದಿಲ್ಲ.ಈ ಆಡಳಿತದ 'ಸರ್ಕಾರಿ ಹುದ್ದೆ ಮಾರಾಟ ಯೋಜನೆ' ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಎಸ್ಡಿಎ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ವರದಿಯನ್ನು ಉಲ್ಲೇಖಿಸಿತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಹಂಚಿಕೊಂಡಿರುವ 'ಕರ್ನಾಟಕ ಕಾಂಗ್ರೆಸ್' ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) 1,323 ಹುದ್ದೆಗಳ ನೇಮಕಾತಿಗೆ 2021ರ ಸೆಪ್ಟೆಂಬರ್ 19ರಂದು ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬ್ಲೂ ಟೂತ್ ಪರಿಕರ ಮತ್ತು ಮೈಕ್ರೋಫೋನ್ ಬಳಸಿ ಅಕ್ರಮ ನಡೆಸಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ ಎಂದು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು.
ವರದಿಯ ಚಿತ್ರ ಹಂಚಿಕೊಂಡಿರುವ ಕಾಂಗ್ರೆಸ್,'ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ನೇಮಕಾತಿಯೂ ಪ್ರಮಾಣಿಕವಾಗಿ ನಡೆದಿಲ್ಲ. ಪಿಎಸ್ಐ ಹಗರಣದ ನಂತರ ಎಫ್ಡಿಎ ಪರೀಕ್ಷಾ ಅಕ್ರಮಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ.ಈ ಸರ್ಕಾರದ ಒಂದೇ ಒಂದು ಯಶಸ್ವಿ ಯೋಜನೆ ಎಂದರೆ 'ಸರ್ಕಾರಿ ಹುದ್ದೆ ಮಾರಾಟ ಯೋಜನೆ' ಮಾತ್ರ!.ನಿಮ್ಮ ಭ್ರಷ್ಟೋತ್ಸವದಲ್ಲಿಸಾಧನೆಗಳನ್ನು ಹೇಳಿಕೊಳ್ಳುತ್ತೀರಾ?' ಎಂದು ಬಿಜೆಪಿಯನ್ನು ಉದ್ದೇಶಿಸಿ ಪ್ರಶ್ನಿಸಿದೆ.
ಇದಕ್ಕೂ ಮುನ್ನ,ಸರ್ಕಾರ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿರುವ ವಿಶೇಷ 'ಒಳನೋಟ' ವಿಶೇಷ ವರದಿಗಳನ್ನೂ ಹಂಚಿಕೊಂಡಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರದಲ್ಲಿ ಶೇ 40 ಕಮಿಷನ್ ಭ್ರಷ್ಟಾಚಾರದ ಸೋಂಕು ಕೋವಿಡ್ಗಿಂತಲೂ ಅಪಾಯಕಾರಿಯಾಗಿ ವ್ಯಾಪಿಸಿದೆ’ ಎಂದು ಹರಿಹಾಯ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.