ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ಕುಮಾರ್ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದ್ದರೆ, ಬಿಜೆಪಿ ಆಕ್ಷೇಪಿಸಿದೆ.
ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಜೆಡಿಎಸ್ ಸ್ವಾಗತಿಸಿದೆ. ಹಣ, ಅಧಿಕಾರದ ಆಸೆಗೆ ಜನಾದೇಶ ದಿಕ್ಕರಿಸಿದವರಿಗೆ ಇದು ಸರಿಯಾದ ಪಾಠ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
‘ಅತೃಪ್ತ ಶಾಸಕರ ಅನರ್ಹಗೊಳಿಸಿದ ಮಾನ್ಯ ಸಭಾಧ್ಯಕ್ಷರು ಕೊಟ್ಟಿರುವ ತೀರ್ಪನ್ನು ಸ್ವಾಗತಿಸುತ್ತೇವೆ’ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದೆ.
‘ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿ ಈ ತೀರ್ಪು ಇತಿಶ್ರೀ ಹಾಡಲಿದೆ ಎನ್ನುವುದ ನನ್ನ ನಂಬಿಕೆ’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ಅನುಕೂಲಕ್ಕೆ ತಕ್ಕಂತೆ ಭಾನುವಾರ ರಜಾ ದಿನವಾಗುತ್ತೆ. ಅನುಕೂಲಕ್ಕೆ ತಕ್ಕಂತೆ ಕೆಲಸದ ದಿನವೂ ಆಗುತ್ತೆ’ ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರು ಪ್ರಸ್ತಾಪಿಸದೇ ಕಾಲೆಳೆದಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಕಪ್ಪುಚುಕ್ಕೆ
‘ರಮೇಶ್ಕುಮಾರ್ ಅವರೇ ನಿಮ್ಮ ಬಗ್ಗೆ ಜನರು ಇಟ್ಟಿದ್ದ ಗೌರವ ವಿಶ್ವಾಸ ಕಡಿಮೆಯಾಗಿದೆ. ನೀವು ಆ ಸ್ಥಾನಕ್ಕೆ ಕಪ್ಪುಚುಕ್ಕೆ’ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟರೆ ಗೌರವದಿಂದ ಅಂಗೀಕರಿಸಬೇಕಿತ್ತು. ಆದರೆ ನೀವು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿ ಅನರ್ಹಗೊಳಿಸಿದ್ದೀರಿ. ಪ್ರಜಾತಂತ್ರ ವ್ಯವಸ್ಥೆ ಕಗ್ಗೊಲೆ ಮಾಡಿದ್ದೀರಿ’ ಎಂದು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.