ADVERTISEMENT

ಬೆಂಗಳೂರು| ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಪರಿಶೀಲನೆ: ಸಚಿವ ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 15:21 IST
Last Updated 6 ಅಕ್ಟೋಬರ್ 2025, 15:21 IST
ಎಚ್‌.ಕೆ. ಪಾಟೀಲ
ಎಚ್‌.ಕೆ. ಪಾಟೀಲ   

ಬೆಂಗಳೂರು: ‘ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಸಹಕಾರ ಸಂಘಗಳನ್ನು ರಚಿಸಬೇಕೇ ಅಥವಾ ಬೇರೆ ಕ್ರಮ ತೆಗೆದುಕೊಳ್ಳಬೇಕೇ ಎಂಬ ಕುರಿತು ನಿರ್ಣಯ ಕೈಗೊಂಡು ಸಚಿವ ಸಂಪುಟಕ್ಕೆ ವರದಿ ನೀಡಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಕುರಿತು ಚರ್ಚಿಸಿ, ಶಿಫಾರಸು ಮಾಡಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, ‘ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ ಸುಪ್ರೀಂ ಕೋರ್ಟ್‌ ಆಗಸ್ಟ್‌ 19ರಂದು ನೀಡಿದ್ದ ತೀರ್ಪಿನಲ್ಲಿ ಕೆಲವು ಅಂಶಗಳನ್ನು ಗಂಭೀರವಾಗಿ ಉಲ್ಲೇಖಿಸಿದೆ. ಈ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ’ ಎಂದರು.

‘ಹೊರಗುತ್ತಿಗೆ ನೌಕರರ ವ್ಯವಸ್ಥೆಯಲ್ಲಿ ಖಾಸಗಿ ಏಜೆನ್ಸಿ ಮೂಲಕ ಶೋಷಣೆ ನಡೆಯುತ್ತಿದೆ. ಈ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಉದ್ದೇಶದಿಂದ ಬೀದರ್‌ನಲ್ಲಿ ಅಲ್ಲಿನ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ರಚಿಸಲಾಗಿದೆ. ಅದೇ ಮಾದರಿಯಲ್ಲಿ ಸಹಕಾರ ಸಂಸ್ಥೆ ಸ್ಥಾಪಿಸಲು ಕಾರ್ಮಿಕ ಇಲಾಖೆ ಆಲೋಚನೆ ಮಾಡಿತ್ತು’ ಎಂದು ಹೇಳಿದರು.

ADVERTISEMENT

ಹೊರ ಗುತ್ತಿಗೆ ನೌಕರರ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಇದೇ ಆಗಸ್ಟ್‌ 19ರಂದು ನೀಡಿರುವ ಮತ್ತು 2024ರ ಡಿಸೆಂಬರ್‌ ತಿಂಗಳಿನಲ್ಲಿ ನೀಡಿರುವ ತೀರ್ಪುಗಳ ಆಧಾರದಲ್ಲಿ ಇಡೀ ವ್ಯವಸ್ಥೆಯನ್ನು ಪುನರ್‌ ಪರಿಶೀಲಿಸಬೇಕೆ, ಕಾನೂನಿಗೆ ಪೂರಕವಾಗಿ ಈ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಎಲ್ಲ ಇಲಾಖೆಗಳು ಮುಂದಿನ ಸಭೆಗೆ ಅಭಿಪ್ರಾಯ ನೀಡಬೇಕು ಎಂದೂ ಸಮಿತಿ ತಿಳಿಸಿದೆ.

ಸಚಿವ ಲಾಡ್‌ ಅಸಮಾಧಾನ

ಇಂಧನ ಇಲಾಖೆಯ ಅಡಿಯಲ್ಲಿರುವ ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳಲ್ಲಿರುವ 13 ಸಾವಿರಕ್ಕೂ ಹೆಚ್ಚು ಹೊರ ಗುತ್ತಿಗೆ ನೌಕರರ ಕಾಯಮಾತಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ನಡೆದ ಚರ್ಚೆ ಮತ್ತು ಕರಡು ಅಧಿಸೂಚನೆ ಕುರಿತಂತೆ ಕೆಪಿಟಿಸಿಎಲ್‌ ನೀಡಿರುವ ಸ್ಪಷ್ಟನೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು. ಸ್ಪಷ್ಟನೆ ನೀಡಿರುವ ಕೆಪಿಟಿಸಿಎಲ್‌ನ ನಡೆಗೆ ಸಭೆಯಲ್ಲಿದ್ದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದೂ ಗೊತ್ತಾಗಿದೆ. 

ಆರ್ಥಿಕ ಇಲಾಖೆಯ ಅಧಿಕಾರಿಗಳು ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದರು. ಸುಪ್ರೀಂ ಕೋರ್ಟ್‌ ತೀರ್ಪನ್ನು ಪರಿಶೀಲಿಸಿ, ಮುಂದಿನ ಸಭೆಗೆ ವಿವರ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು ಎಂದು ಗೊತ್ತಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಕಾರ್ಮಿಕ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಕಾರ್ಮಿಕ ಕಲ್ಯಾಣವನ್ನು ಲಘುವಾಗಿ ಪರಿಗಣಿಸಬಾರದೆಂದು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿವೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿದ್ದೇವೆ ‌
ಎಚ್‌.ಕೆ. ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

‘ಮುಂದಿನ ಸಭೆಗೆ ಸಮಗ್ರ ಮಾಹಿತಿ ಸಲ್ಲಿಸಿ’

ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ಕಾರ್ಮಿಕರ ವರ್ಗವಾರು ಸಂಖ್ಯೆ ಮತ್ತು ವಿವರ ಈ ನೌಕರರನ್ನು ಒದಗಿಸಿರುವ ಏಜನ್ಸಿಗಳಿಗೆ ನೀಡುತ್ತಿರುವ ಸೇವಾ ಶುಲ್ಕ ಮತ್ತು ಜಿಎಸ್‌ಟಿ ಪ್ರಾಣಾಪಾಯದ ಕೆಲಸ ಮಾಡುವ ನೌಕರರ ವಿವರ (ಪೌರ ಕಾರ್ಮಿಕರು ಚಾಲಕರು ಮತ್ತು ಇಂಧನ ಇಲಾಖೆಯ ವಿದ್ಯುತ್‌ ಸಂಬಂಧಿ ಕಾರ್ಯನಿರ್ವಹಿಸುವ ನೌಕರರು ಆರೋಗ್ಯ ಇಲಾಖೆಯಲ್ಲಿ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಗಣಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಮತ್ತು ಸಿಬ್ಬಂದಿ) ಈ ಕಾರ್ಮಿಕರು ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಮುಂತಾದ ಮಾಹಿತಿಯನ್ನು ಮುಂದಿನ ಸಭೆಗೆ ಸಲ್ಲಿಸುವಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸಮಿತಿಯು ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.