ADVERTISEMENT

ಮತಾಂತರ ನಿಷೇಧ: ಮಠಾಧೀಶರ ಬೆಂಬಲ ಕೋರಿದ ಸಿಂ ಬಸವರಾಜ ಬೊಮ್ಮಾಯಿ

ನೀವು ಚಳವಳಿ ಮಾಡಿ ಎಂದು ಸ್ವಾಮೀಜಿಗಳಿಗೆ ಸಲಹೆ ನೀಡಿದ ಸಿಎಂ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 7:49 IST
Last Updated 20 ಡಿಸೆಂಬರ್ 2021, 7:49 IST
ಮತಾಂತರ ನಿಷೇಧ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ, ಕಾಯ್ದೆಯನ್ನು ಕೂಡಲೇ ಜಾರಿಗೊಳಿಸುವಂತೆ  ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಉತ್ತರ ಪ್ರಾಂತದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಠಾಧೀಶರ ಸಭೆಯಲ್ಲಿ ಸಿಎಂ ಬಸರವಾಜ ಬೊಮ್ಮಾಯಿ ಭಾಗವಹಿಸಿದ್ದರು
ಮತಾಂತರ ನಿಷೇಧ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ, ಕಾಯ್ದೆಯನ್ನು ಕೂಡಲೇ ಜಾರಿಗೊಳಿಸುವಂತೆ  ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಉತ್ತರ ಪ್ರಾಂತದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಠಾಧೀಶರ ಸಭೆಯಲ್ಲಿ ಸಿಎಂ ಬಸರವಾಜ ಬೊಮ್ಮಾಯಿ ಭಾಗವಹಿಸಿದ್ದರು   

ಬೆಳಗಾವಿ: ಮತಾಂತರ ನಿಷೇಧ ಮಸೂದೆಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದು ಕಾಯ್ದೆಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಂಬಲ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಮಠಾಧೀಶರನ್ನು ಕೋರಿದರು.

ಮತಾಂತರ ನಿಷೇಧ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ, ಕಾಯ್ದೆಯನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಉತ್ತರ ಪ್ರಾಂತದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಠಾಧೀಶರ ಸಭೆಯಲ್ಲಿ ಶ್ರೀಗಳು ಹಾಗೂ ವಿಎಚ್‌ಪಿ ಮುಖಂಡರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ನಮ್ಮ ಅಸ್ಮಿತೆ ಇಲ್ಲದೆ ಬದುಕಲಾಗುವುದಿಲ್ಲ. ಹೀಗಿರುವಾಗ, ನಮ್ಮಲ್ಲಿರುವ ಬಡತನ–ಅಸಹಾಯಕತೆ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿವೆ. ಇದನ್ನು ತಡೆಯಬೇಕಾಗಿದೆ’ ಎಂದರು.

ADVERTISEMENT

‘ಆಸೆ, ಆಮಿಷ, ಒತ್ತಡ, ಒತ್ತಾಯದಿಂದ ಮತಾಂತರ ಮಾಡುವುದನ್ನು ತಡೆಯಲು ಕಾನೂನು ಬೇಕಾಗಿದೆ. ಜತೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಚಳವಳಿಯ ಅಗತ್ಯವೂ ಇದೆ. ಹಿಂದೂ ಧರ್ಮ ನಶಿಸಿ ಹೋಗುವ ಸಂದರ್ಭದಲ್ಲಿ ಶಂಕರಾಚಾರ್ಯರು ಮಾಡಿದ್ದ ರೀತಿಯಲ್ಲಿ ಚಳವಳಿಗೆ ಮಠಾಧೀಶರು ಚಿಂತನೆ ನಡೆಸಬೇಕು. ಸರ್ಕಾರದ ಭಾಗವಾಗಿ ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಸಾಮಾಜಿಕ ಚಳವಳಿ ನಡೆಸಲು ಪೂಜ್ಯರಿಗೆ ಅಗತ್ಯ ಸಹಕಾರವನ್ನು ನಾವೂ ಕೊಡುತ್ತೇವೆ. ೆಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡು ನಮ್ಮತನವನ್ನು ಉಳಿಸಿಕೊಳ್ಳಬೇಕಾಗಿದೆ’ ಎಂದರು.

‘ಮತಾಂತರ ನಿಷೇಧ ಕಾನೂನು ಬೇಕೋ–ಬೇಡವೋ ಎಂಬ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ವಿರೋಧ ಮಾಡುತ್ತಿರುವವರೇ 2016ರಲ್ಲಿ ಜಾರಿಗೆ ತರಲು ಪ್ರಯತ್ನಿಸಿದ್ದರು. ಅವರದೇ ಆದ ರಾಜಕೀಯ ಹಿತಾಸಕ್ತಿಯಿಂದಾಗಿ ನಿಲ್ಲಿಸಿದ್ದರು’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಮತಾಂತರ ನಿಷೇಧವು ಸಮಾಜದ ಅಗತ್ಯವಾಗಿದೆ. ಆ ಪಕ್ಷ ಈ ಪಕ್ಷ ಎನ್ನುವುದು ಇಲ್ಲಿ ಬರುವುದಿಲ್ಲ. ಸಮಾಜದ ಅವಶ್ಯವನ್ನು ಜವಾಬ್ದಾರಿಯುತ ಸರ್ಕಾರ ಈಡೇರಿಸದಿದ್ದರೆ, ಆಶಯಗಳಿಗೆ ಪ್ರತಿಕ್ರಿಯಿಸದಿದ್ದರೆ ಅರ್ಥವಿರುವುದಿಲ್ಲ’ ಎಂದು ಹೇಳಿದರು.

‘ಆ ರೀತಿಯ ಮತಾಂತರ ಮಾಡುವುದರಿಂದ ಕ್ಷೋಭೆ ಉಂಟಾಗುತ್ತಿದೆ. ಮನಸ್ಸು ಮನಸ್ಸುಗಳು ದೂರಾಗುತ್ತಿವೆ. ಒಂದೇ ಮನೆಯಲ್ಲಿ ತಂದೆ–ಮಕ್ಕಳ ನಡುವೆ ಗೋಡೆಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಅವಕಾಶ ಕೊಡಬಾರದು ಎಂಬ ಸ್ಪಷ್ಟ ಉದ್ದೇಶ ನಮ್ಮದಾಗಿದೆ. ನಮ್ಮ ನಿರ್ಣಯ ಪ್ರಮುಖ ಹಂತದಲ್ಲಿದೆ. ಅಧಿವೇಶನ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ಕೊಡುವುದಿಲ್ಲ. ಆದರೆ, ಶ್ರೀಗಳು ಮತ್ತು ಸಮಾಜದ ಭಾವನೆಗಳಿಗೆ ಹಾಗೂ ಇಚ್ಛೆಗೆ ತಕ್ಕಂತೆ ಸ್ಪಂದಿಸುತ್ತೇವೆ. ಈ ನಿಟ್ಟಿನಲ್ಲಿ ನಾವು ಸಕಾರಾತ್ಮಕವಾಗಿ ಹೆಜ್ಜೆ ಇಡುತ್ತೇವೆ. ನಮ್ಮ ಮೇಲೆ ವಿಶ್ವಾಸವಿರಲಿ’ ಎನ್ನುವ ಮೂಲಕ ಮಸೂದೆ ಮಂಡನೆಯ ಸುಳಿವನ್ನು ಮತ್ತೊಮ್ಮೆ ನೀಡಿದರು.

‘ಶ್ರೀಗಳು, ಮಹತ್ವದ ವಿಚಾರದಲ್ಲಿ ಮನವಿ ಸಲ್ಲಿಸಿದ್ದರಿಂದ ನನಗೆ ಬಲ ಬಂದಂತಾಗಿದೆ. ಮುಂದಿನ ಹೆಜ್ಜೆ ಇಡಲು ಸ್ಫೂರ್ತಿ ಹಾಗೂ ಶಕ್ತಿ ಕೊಟ್ಟಿದೆ. ನಮ್ಮ ಕಾರ್ಯ ಯಶಸ್ವಿಯಾಗಲು ಶ್ರೀಗಳೆಲ್ಲರ ಆಶೀರ್ವಾದ ಇರಲಿ’ ಎಂದು ಕೋರಿದರು.

‘ಹಿಂದೂ ಧರ್ಮವು, ಇಡೀ ವಿಶ್ವದಲ್ಲೇ ಎಲ್ಲ ಧರ್ಮಗಳಿಗಿಂತ ಹೃದಯ ವೈಶಾಲ್ಯ, ವೈಚಾರಿಕತೆ ಹೊಂದಿದೆ. ಮಾನವೀಯ ಧರ್ಮ ಪರಿಪಾಲನೆ ಮಾಡುವ ಧರ್ಮವಾಗಿದೆ. ಹೀಗಾಗಿ, ವೈಶಿಷ್ಟ್ಯಪೂರ್ಣವಾದ ದೇಶ ನಮ್ಮದು’ ಎಂದರು.

‘ನಮ್ಮ ಮೇಲೆ ಭೌಗೋಳಿಕವಾಗಿ ದಾಳಿಯಾಗಿದೆ. ಆಗೆಲ್ಲಾ ಹಿಂದೂ ದರ್ಮ ಸಂಕಷ್ಟಕ್ಕೀಡಾಗಿದೆ. ಹಲವು ಸಂದರ್ಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆದಿದೆ. ಕಾಲಕಾಲಕ್ಕೆ ನಡೆದಿದೆ. ದೇಶದಲ್ಲಿರುವ ಇತರ ಧರ್ಮೀಯರ ಮೂಲ ಹುಡುಕಿದಾಗ ಅವರೆಲ್ಲರೂ ಹಿಂದೂ ಧರ್ಮೀಯರೇ ಆಗಿದ್ದಾರೆ. ಭೌಗೋಳಿಕ ದಾಳಿ ಜೊತೆಗೆ ಧಾರ್ಮಿಕ ದಾಳಿಯು ಹಿಂದೆ ನೇರವಾಗಿಯೇ ಮತಾಂತರದ ಮೂಲಕ ಆಗುತ್ತಿತ್ತು. ಆದರೆ, ಈಗ ಗುಪ್ತವಾಗಿ ನಡೆಯುತ್ತಿರುವುದನ್ನು ಗಮನಿಸಿದ್ದೇವೆ’ ಎಂದರು.

‘ಆಧುನಿಕ ಇತಿಹಾಸದ ಪುಟಗಳನ್ನು ನೋಡಿದರೆ, ಯಾವುದಾದರೂ ದೇಶದಲ್ಲಿ ಅತಿ ಹೆಚ್ಚು ಭಕ್ತಿಯ ಚಳವಳಿ ಆಗಿದ್ದರೆ ಅದು ನಮ್ಮ ದೇಶದಲ್ಲಿ ಮಾತ್ರವೇ ಆಗಿದೆ. ಬಸವಣ್ಣ ಸೇರಿದಂತೆ ಹಲವು ಮಹನೀಯರ ಚಳವಳಿ ಅಭೂತಪೂರ್ವವಾದುದು. ಭಾರತಮಾತೆಯ ನೆಲದಲ್ಲಿ ಮಾತ್ರವೇ ಇದೆಲ್ಲವೂ ಆಗಿದೆ. ಇದೇ ಕಾರಣಕ್ಕಾಗಿ, ಧರ್ಮ– ಧರ್ಮಗಳ ನಡುವಿನ ಪೈಪೋಟಿಯಲ್ಲಿ, ಈ ವೈಶಿಷ್ಟ್ಯಪೂರ್ಣವಾದ ನಮ್ಮ ಧರ್ಮವನ್ನು ಅತ್ಯಂತ ವಕ್ರ ದೃಷ್ಟಿಯಿಂದ ನೀಡುವುದು ನೂರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಬೇರು–ವೈಚಾರಿಕತೆ ಗಟ್ಟಿಯಾಗಿರುವುದರಿಂದ ಎಲ್ಲವನ್ನೂ ಮೆಟ್ಟಿ ನಿಂತಿದ್ದೇವೆ’ ಎಂದು ಹೇಳಿದರು.

‘ಮಾನವೀಯ ಧರ್ಮವನ್ನು ನಾವು ಪರಿಪಾಲನೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರನ್ನೂ ಗೌರವ–ಪ್ರೀತಿಯಿಂದ ಕಾಣಬೇಕು ಎನ್ನುವುದು ನಮ್ಮ ಧರ್ಮದ ಮೂಲಗುಣವಾಗಿದೆ. ಇದು ನಮ್ಮ ಶಕ್ತಿಯೂ ಹೌದು; ಕೆಲವು ಸಂದರ್ಭಗಳಲ್ಲಿ ದೌರ್ಬಲ್ಯವೂ ಕೂಡ’ ಎಂದು ವಿಶ್ಲೇಷಿಸಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ‘ಮತಾಂತರವು ದೇಶದ ಅಖಂಡತೆಗೆ ಮಾರಕವಾಗಿದೆ. ಸಮಾಜದಲ್ಲಿ ಎಲ್ಲ ಧರ್ಮಗಳ ಮಧ್ಯೆ ಇದ್ದುಕೊಂಡು ಮತಾಂತರ ಮಾಡುತ್ತಿರುವ ಮತಾಂತರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿ ಮಠದ ಅದೃಶ ಕಾಡಸಿದ್ದೇಶ್ವರ ಸ್ವಾಮೀಜಿ ಮೊದಲಾದವರು ಭಾಗವಹಿಸಿದ್ದರು.

ಸಚಿವರಾದ ಮುರುಗೇಶ ನಿರಾಣಿ, ಪ್ರಭು ಚವ್ಹಾಣ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಸಭಿಕರ ಸಾಲಿನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.