ADVERTISEMENT

ಒಕ್ಕಲಿಗರ ಮೀಸಲಾತಿ ಹೆಚ್ಚಳ ಸರ್ಕಾರಕ್ಕೆ ಮನವರಿಕೆ: ಗಾ.ನಂ. ಶ್ರೀಕಂಠಯ್ಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 19:00 IST
Last Updated 25 ಮಾರ್ಚ್ 2023, 19:00 IST

ಬೆಂಗಳೂರು: ‘ಒಕ್ಕಲಿಗ ಸಮುದಾಯಕ್ಕೆ ರಾಜ್ಯ ಸರ್ಕಾರವು ‘ಪ್ರವರ್ಗ-2ಸಿ’ ಅಡಿ ಶೇಕಡ 6ರಷ್ಟು ಮೀಸಲಾತಿ ನೀಡಿರು
ವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಹೆಚ್ಚಿನ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು’ ಎಂದು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ಅಧ್ಯಕ್ಷ ಗಾ.ನಂ. ಶ್ರೀಕಂಠಯ್ಯ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರ್ಮಲಾನಂದನಾಥ ಸ್ವಾಮೀಜಿ, ಕುಮಾರ
ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮೀಸಲಾತಿ ಹೆಚ್ಚಿಸುವಂತೆ ಮೂರು ವರ್ಷ ಸತತವಾಗಿ ನಮ್ಮ ಸಮಿತಿಯು ಹೋರಾಟ ಮಾಡಿತ್ತು. ನಮ್ಮ ಬೇಡಿಕೆ ಹೆಚ್ಚಿದ್ದರೂ ರಾಜ್ಯ ಸರ್ಕಾರವು ಕಾನೂನಿನ ಇತಿಮಿತಿಯಲ್ಲಿ ‘ಪ್ರವರ್ಗ-2ಸಿ’ ಅಡಿ, ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇ 4ರಿಂದ ಶೇ 6ಕ್ಕೆ ಹೆಚ್ಚಳ ಮಾಡಿದೆ. ಇದರಿಂದ ಸಮುದಾಯದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿವೆ’ ಎಂದರು.

‘ಒಕ್ಕಲಿಗ ಸಮುದಾಯದವರು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 16 ರಷ್ಟಿದ್ದಾರೆ. ಒಕ್ಕಲಿಗರೊಡನೆ ಕೊಡವ, ರೆಡ್ಡಿ, ಕಾಪು ಇನ್ನಿತರೆ ಉಪಜಾತಿಗಳನ್ನು ಸೇರಿಸಲಾಗಿದೆ. ಶೇ 21ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ‘ಪ್ರವರ್ಗ-3ಎ’ಗೆ, ಕೇವಲ ಶೇ 4 ರಷ್ಟು ಮೀಸಲಾತಿ ನೀಡಲಾಗಿತ್ತು. ಒಕ್ಕಲಿಗ ಸಮುದಾಯಕ್ಕೆ ಶೇ 3ಕ್ಕೂ ಕಡಿಮೆ ಮೀಸಲಾತಿ ಸಿಗುತ್ತಿತ್ತು. ಹೀಗಾಗಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಕ್ಕಲಿಗ ಹಾಗೂ ಇನ್ನಿತರೆ ಹಿಂದುಳಿದ ಜಾತಿಯನ್ನು ಒಳಗೊಂಡ ‘ಪ್ರವರ್ಗ-3ಎ’ ಅಡಿ ಶೇ 12ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಕೋರಲಾಗಿತ್ತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮನವರಿಕೆ ಮಾಡಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.