ಮಂಡ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್ಪಿ ಧನಂಜಯ ಸೇರಿ 15 ಪೊಲೀಸ್ ಸಿಬ್ಬಂದಿಗೆ ಶನಿವಾರ ಕೋವಿಡ್–19 ಪತ್ತೆಯಾಗಿದೆ.
ಮಳವಳ್ಳಿ ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್, ಮಂಡ್ಯ ಡಿವೈಎಸ್ಪಿ ಮಂಜುನಾಥ್, ಕೆ.ಆರ್.ಪೇಟೆ ಠಾಣೆ ಇನ್ಸ್ಪೆಕ್ಟರ್ ನಿರಂಜನ್, ಮಂಡ್ಯ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಆನಂದೇಗೌಡ, ಶ್ರೀರಂಗಪಟ್ಟಣ ಠಾಣೆ ಇನ್ಸ್ಪೆಕ್ಟರ್ ಪುನೀತ್ ಸೇರಿ ನಾಲ್ವರು ಎಎಸ್ಐ, ನಾಲ್ವರು ಕಾನ್ಸ್ಟೆಬಲ್ಗಳಿಗೆ ಸೋಂಕು ಪತ್ತೆಯಾಗಿದೆ.
ಕಳೆದ ವಾರ ಪೊಲೀಸ್ ಸಿಬ್ಬಂದಿಯ ಕ್ರೀಡಾಕೂಟ ನಡೆಯಿತು. ಆದಿಚುಂಚನಗಿರಿಯಲ್ಲಿ ನಡೆದ ಯುವಜನೋತ್ಸವದಲ್ಲಿ ಜ.4ರಂದು ರಾಜ್ಯಪಾಲ ಥ್ಯಾವರ್ಚಂದ್ ಗೆಹಲೋತ್, ಜ.5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಕೋವಿಡ್ ಕರ್ತವ್ಯದಲ್ಲೂ ತೊಡಗಿದ್ದರು. ಈ ವೇಳೆ ಸೋಂಕು ಬಂದಿರಬಹುದು ಎಂದು ಶಂಕಿಸಲಾಗಿದೆ.
‘ಎಲ್ಲರೂ ಆರೋಗ್ಯದಿಂದಿದ್ದು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.