ADVERTISEMENT

ಕೋವಿಡ್ ನಿಯಂತ್ರಣಕ್ಕೆ ಖನಿಜ ನಿಧಿಯ ₹ 10 ಕೋಟಿ: ಸಚಿವ ಆನಂದ್ ಸಿಂಗ್

ಬಳ್ಳಾರಿ ಜಿಲ್ಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 4:42 IST
Last Updated 15 ಆಗಸ್ಟ್ 2020, 4:42 IST
ಭಾಷಣ ಮಾಡುತ್ತಿರುವ ಸಚಿವ ಆನಂದ್‌ ಸಿಂಗ್‌
ಭಾಷಣ ಮಾಡುತ್ತಿರುವ ಸಚಿವ ಆನಂದ್‌ ಸಿಂಗ್‌   

ಬಳ್ಳಾರಿ: 'ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದ ಸಲುವಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದ ₹ 10 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ‌ ಆನಂದ್ ಸಿಂಗ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, 'ಖನಿಜ ನಿಧಿಯನ್ನು ಬಳಸಿ ತುರ್ತು‌ ಅವಶ್ಯವಿರುವ ವೈದ್ಯಕೀಯ ಪರಿಕರಗಳು, ಔಷಧಿ ಖರೀದಿಸಲಾಗುವುದು' ಎಂದು ಹೇಳಿದರು.

'ಪ್ರತಿಷ್ಠಾನಕ್ಕೆ 2015-16ನೇ ಸಾಲಿನಿಂದ ಐದು ಹಂತದಲ್ಲಿ ಒಟ್ಟು ₹ 1834 ಕೋಟಿ ವೆಚ್ಚದ ಕ್ರಿಯಾ ಯೋಜನೆಗಳನ್ನು ತಯಾರಿಸಲಾಗಿದ್ದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ' ಎಂದರು.

ADVERTISEMENT

'ಇದುವರೆಗೆ ಖನಿಜ ನಿಧಿಗೆ ₹ 1190.25 ಕೋಟಿ ಅನುದಾನ ಸಂಗ್ರಹಿಸಲಾಗಿದೆ. ₹ 279.27 ಕೋಟಿಯನ್ನು ಅನುಷ್ಠಾನಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆಗೆ ₹ 194.64 ಕೋಟಿ ಮೀಸಲಿಡಲಾಗಿದೆ' ಎಂದು ಮಾಹಿತಿ ನೀಡಿದರು.

'ಸಂಡೂರು ತಾಲ್ಲೂಕಿನ ಕುಡಿಯುವ ನೀರು ಯೋಜನೆಗೆ ₹ 169.31 ಕೋಟಿ ಮೀಸಲಿಡಲಾಗಿದೆ. ಕೌಶಲಾಭಿವೃದ್ಧಿಗೆ ₹ 53 ಕೋಟಿ, ವಿಮ್ಸ್ ಅಭಿವೃದ್ಧಿಗೆ ₹ 32 ಕೋಟಿ ಮೀಸಲಿಡಲಾಗಿದೆ' ಎಂದರು.

'ಸ್ವಾತಂತ್ರ್ಯ ಹೋರಾಟ ದಲ್ಲಿ ಜಿಲ್ಲೆಯು ಜಾಗೃತ ಮತ್ತು ಚೈತನ್ಯ ಶೀಲ ಜಿಲ್ಲೆಯಾಗಿತ್ತು. ಕನ್ನಡ- ತೆಲುಗಿನ ಮಂದಿ ಭಾಷಾ ಭೇದ ಮರೆತು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್ ಅವರು ಜಿಲ್ಲೆಗೆ ಭೇಟಿ ನೀಡಿದ್ದರೆಂಬುದು ಮಹತ್ವದ ಸಂಗತಿ' ಎಂದರು.

ಕೊರೊನಾ ಸೈನಿಕರಿಗೆ ಸನ್ಮಾನ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ‌ ವಿವಿಧ ಕ್ಷೇತ್ರಗಳ ಸಿಬ್ಬಂದಿಯನ್ನು ಸಚಿವರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ಸನ್ಮಾನಿತರು: ಡಾ.ಕಿರಣ್ ಚಂದ್ ಎನ್., ಡಾ.ಇಂದ್ರಾಣಿ, ಡಾ.ಆರ್.ಅಬ್ದುಲ್ಲಾ, ಡಾ.ರವಿಚಂದ್ರ, ಡಾ.ಕುಶಾಲ್ ರಾಜ, ಡಾ.ಸಿ.ಬಸವರಾಜ, ಈಶ್ವರ ದಾಸಪ್ಪನವರ್.ಯು.ರಮೇಶ್, ಗಜಲ್ ಬಾನು, ಕೆ.ಎಂ.ನಾಗರಾಜ, ಶ್ರೀಧರಮೂರ್ತಿ,ಹನುಮಂತಮ್ಮ, ಶಾಂತಕುಮಾರ್, ಡಿ.ಎಂ.ಶ್ರೀನಿವಾಸ್,

ಶಿಕ್ಷಣ: ಎ.ಮಲ್ಲಪ್ಪ, ವೀರಣ್ಣ ಬಡಿಗೇರ್, ಬಿ.ಮನೋಹರ್, ಕಂದಾಯ ಇಲಾಖೆಯ ಮಲ್ಲಿಕಾರ್ಜುನಗೌಡ ಮತ್ತು ಶ್ರೀನಿವಾಸಲು. ಪೌರ ಕಾರ್ಮಿಕ ಎನದ.ನಾಗಭೂಷಣ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ‌ ಪಡೆದ ಬಿ.ರಶ್ಮಿ, ಸುನಿಲ್ ನಾಯಕ್, ಶ್ರೀದೇವಿ, ದ್ಚಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕರಿಗೌಡ್ರು ದಾಸನಗೌಡ, ಗಣಾಚಾರಿ ಶಾಲಿನಿ,ರಾಜಪುರೋಹಿತ, ಸುನೀತಾ ಸನ್ಮಾನ ಸ್ವೀಕರಿಸಿದರು.

ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ‌ ವೀರಭದ್ರಪ್ಪ, ಜಿಲ್ಲಾಧಿಕಾರಿ ಎಸ್. ಎಸ್.ನಕುಲ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಿ.ಭಾರತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಉಪಸ್ಥಿತರಿದ್ದರು.

ಸಶಸ್ತ್ರ ಪೊಲೀಸ್, ನಾಗರಿಕ ಪೊಲೀಸ್ ಗೃಹರಕ್ಷಕ‌ದಳದ ನಾಲ್ಕು ತಂಡಗಳಿಂದ ಪಥ ಸಂಚಲನ ನಡೆಯಿತು. ಸಾರ್ವಜನಿಕರು‌ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.