ADVERTISEMENT

ಕೋವಿಡ್: ರಾಜ್ಯದಲ್ಲಿ ಮೃತರ ಸಂಖ್ಯೆ 47ಕ್ಕೆ ಏರಿಕೆ

ಸೋಂಕಿತ 1043 ಮಂದಿಗೆ ಮಹಾರಾಷ್ಟ್ರ ನಂಟು

​ಪ್ರಜಾವಾಣಿ ವಾರ್ತೆ
Published 27 ಮೇ 2020, 20:13 IST
Last Updated 27 ಮೇ 2020, 20:13 IST
   

ಬೆಂಗಳೂರು: ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಮತ್ತೆ ಮೂವರು ಮೃತಪಟ್ಟಿರುವುದು ಪರೀಕ್ಷಾ ವರದಿಯಿಂದ ಬುಧವಾರ ದೃಢಪಟ್ಟಿದೆ. ಇದರಿಂದಾಗಿ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ಹೊಸದಾಗಿ 135 ಮಂದಿ ಕೊರೊನಾ ಸೋಂಕಿತರಾಗಿದ್ದು, ಕೋವಿಡ್ ಪೀಡಿತರ ಸಂಖ್ಯೆ 2,418ಕ್ಕೆ ತಲುಪಿದೆ. ಬುಧವಾರ ವರದಿಯಾದ ಪ್ರಕರಣಗಳಲ್ಲಿ 116 ಮಂದಿ ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಅದರಲ್ಲೂ 114 ಮಂದಿ ಮಹಾರಾಷ್ಟ್ರದ ನಂಟನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೆ ಸೋಂಕಿತರಾದವರ ಪೈಕಿ 1,043 ಮಂದಿ ಮಹಾರಾಷ್ಟ್ರದಿಂದ ಬಂದವರು.

ಕಲಬುರ್ಗಿಯಲ್ಲಿ 28, ಯಾದಗಿರಿಯಲ್ಲಿ 16, ಹಾಸನದಲ್ಲಿ 15, ಬೀದರ್‌ನಲ್ಲಿ 13, ದಕ್ಷಿಣ ಕನ್ನಡದಲ್ಲಿ 11, ಉಡುಪಿಯಲ್ಲಿ 9, ಬೆಂಗಳೂರಿನಲ್ಲಿ 6, ಉತ್ತರ ಕನ್ನಡದಲ್ಲಿ 6, ದಾವಣಗೆರೆಯಲ್ಲಿ 6, ರಾಯಚೂರಿನಲ್ಲಿ 5, ಬೆಳಗಾವಿಯಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 4, ಚಿಕ್ಕಮಗಳೂರಿನಲ್ಲಿ 3, ವಿಜಯಪುರದಲ್ಲಿ 3, ಬೆಂಗಳೂರು ಗ್ರಾಮಾಂತರದಲ್ಲಿ 2 ಹಾಗೂ ಮಂಡ್ಯ, ಬಳ್ಳಾರಿ, ಕೋಲಾರ, ತುಮಕೂರಿನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ADVERTISEMENT

ಮಹಾರಾಷ್ಟ್ರದಿಂದ ಯಾದಗಿರಿಗೆ ಹಿಂದಿರುಗಿದ್ದ 69 ವರ್ಷದ ಮಹಿಳೆ, ಮೇ 20 ರಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆಯೇ ನಿಧನರಾಗಿದ್ದರು. ಅವರ ಗಂಟಲು ದ್ರವದ ಮಾದರಿ ಪಡೆದು, ಪರೀಕ್ಷಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬೀದರ್‌ನ 49 ವರ್ಷದ ವ್ಯಕ್ತಿ ಮೇ 19 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹದಿಂದಲೂ ಬಳಲುತ್ತಿದ್ದ ಅವರು, ಕೊನೆಯುಸಿರೆಳೆದಿದ್ದಾರೆ. ಪರೀಕ್ಷೆ ಬಳಿಕ ಅವರು ಸೋಂಕಿತರಾಗಿದ್ದರು ಎನ್ನುವುದು ಖಚಿತವಾಗಿದೆ.ಮಧುಮೇಹ, ರಕ್ತದೊತ್ತಡ ಹಾಗೂ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ವಿಜಯಪುರದಲ್ಲಿ 82 ವರ್ಷದ ವೃದ್ಧಮಂಗಳವಾರ ನಿಧನರಾಗಿದ್ದರು. ಅವರಿಗೆ ಕೂಡ ಸೋಂಕು ತಗುಲಿತ್ತು ಎನ್ನುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ.

ಕಲಬುರ್ಗಿಯಲ್ಲಿ ಸೋಂಕಿತರಾದವರಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದು,10 ವರ್ಷದೊಳಗಿನ ನಾಲ್ಕು ಮಕ್ಕಳು ಕೂಡಾ ಸೇರಿದ್ದಾರೆ. ಯಾದಗಿರಿಯಲ್ಲಿ ಸೋಂಕಿತರಾದವರಲ್ಲಿ 10 ವರ್ಷದೊಳಗಿನ ಆರು ಮಕ್ಕಳಿದ್ದು, ಮಹಾರಾಷ್ಟ್ರದ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಬೀದರ್‌ನಲ್ಲಿ 15, ದಕ್ಷಿಣ ಕನ್ನಡದಲ್ಲಿ 10, ಉತ್ತರ ಕನ್ನಡ 6 ಹಾಗೂಹಾಸನದ ಎಲ್ಲ ಸೋಂಕಿತರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.ಬೆಂಗಳೂರಿನಲ್ಲಿ ಯುಎಇ ಹಾಗೂ ನೇಪಾಳದಿಂದ ಬಂದವರಿಗೆ ಸೋಂಕು ದೃಢಪಟ್ಟಿದೆ.ದಾವಣಗೆರೆಯಲ್ಲಿ ಬೇರೆ ರೋಗಿಗಳ ಸಂಪರ್ಕದಿಂದ ಆರು ಮಂದಿಗೆ ಸೋಂಕು ತಗುಲಿದೆ.

‘ತೆರೆಯಲಿವೆ ಚರ್ಚ್‌, ಮಸೀದಿ’

‘ಜೂನ್‌ 1ರಂದು ದೇವಸ್ಥಾನ ತೆರೆಯಲು ಅನುಮತಿ ನೀಡುವಾಗಲೇ ಚರ್ಚ್‌ ಮತ್ತು ಮಸೀದಿಗಳ ಆರಂಭಕ್ಕೂ ಅವಕಾಶ ನೀಡುತ್ತೇವೆ. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ‘ಈ ಬಗ್ಗೆ ವಿರೋಧ ಪಕ್ಷಗಳು ತಪ್ಪು ಅಭಿಪ್ರಾಯ ಮೂಡಿಸಲು ಹೋಗಬಾರದು’ ಎಂದರು.

ಒಂದೂವರೆ ಲಕ್ಷ ಮೀರಿದ ಕೋವಿಡ್‌

ನವದೆಹಲಿ: ದೇಶದಲ್ಲಿ ಕೋವಿಡ್‌–19 ದೃಢಪಟ್ಟವರ ಸಂಖ್ಯೆ 1.50 ಲಕ್ಷ ದಾಟಿದೆ. ‘ಹೊಸದಾಗಿ 6,026 ಮಂದಿಗೆ ಬುಧವಾರ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,53,531ಕ್ಕೆ ತಲುಪಿದೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಸಾವಿನ ಪ್ರಮಾಣವು ಶೇ 6.36ರಷ್ಟಿದ್ದರೆ ಭಾರತದಲ್ಲಿ ಅದು ಶೇ 2.86ರಷ್ಟಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.