ಶಿರಸಿ: ಸಹಕಾರ ಚಳವಳಿ ಗಟ್ಟಿಯಾಗಿರುವ ಇಲ್ಲಿ, ಸಹಕಾರ ಸಂಘಗಳು ವಿಪತ್ತಿನ ಸಂದರ್ಭದಲ್ಲೂ ಜನರಿಗೆ ನೆರವಿನ ಹಸ್ತ ಚಾಚುತ್ತಿವೆ. ಲಾಕ್ಡೌನ್ ಸಂದರ್ಭದಲ್ಲಿ, ಜನರಿಗೆ ಜೀವನಾವಶ್ಯಕ ಸಾಮಗ್ರಿ ಪೂರೈಕೆಗೆ ಸಹಕಾರ ವ್ಯವಸ್ಥೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ.
ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಯಾಗಿರುವ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿ(ಟಿಎಸ್ಎಸ್)ಯು, ತಾಲ್ಲೂಕಿನ 13ಕ್ಕೂ ಹೆಚ್ಚು ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ಹಳ್ಳಿಗರಿಗೆ ಕಿರಾಣಿ ಸಾಮಗ್ರಿ ಸರಬರಾಜನ್ನು ಪ್ರಾರಂಭಿಸಿದೆ.
‘ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಇರುವ ಕಾರಣ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಹಳ್ಳಿಗರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ, ದೈನಂದಿನ ಬಳಕೆಗೆ ಅವಶ್ಯವಿರುವ ಸಾಮಗ್ರಿಗಳನ್ನು ಟಿಎಸ್ಎಸ್ ಪೂರೈಕೆ ಮಾಡುತ್ತದೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ದಿನಸಿ ಸಾಮಗ್ರಿಗಳನ್ನು ತಂದು, ಪ್ಯಾಕಿಂಗ್ ಮಾಡಿ ಕಳುಹಿಸಲಾಗಿದೆ. ಸಾಮಗ್ರಿಗಳ ಸರಬರಾಜಿಗೆ ಸಿಬ್ಬಂದಿ ತಂಡ ರಚಿಸಲಾಗಿದೆ’ ಎನ್ನುತ್ತಾರೆ ಟಿಎಸ್ಎಸ್ ವ್ಯವಸ್ಥಾಪಕ ರವೀಶ ಹೆಗಡೆ.
‘ಪ್ರತಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಕನಿಷ್ಠ 5,000 ಜನರು ಇರುತ್ತಾರೆ. ಸಹಕಾರ ಸಂಘಗಳ ಮೂಲಕ ಜನರಿಗೆ ಅಗತ್ಯ ವಸ್ತು ತಲುಪಿಸುವುದು ಸುಲಭವಾಗುತ್ತದೆ. ತಾಲ್ಲೂಕು ಆಡಳಿತ ಗುರುತಿಸಿರುವ ಗ್ರಾಮ ಪಂಚಾಯ್ತಿವಾರು ದಿನಸಿ ಅಂಗಡಿಗಳಿಗೆ ಸಹ ಟಿಎಸ್ಎಸ್ ಸಾಮಗ್ರಿಗಳನ್ನು ಒದಗಿಸುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.