ADVERTISEMENT

ಜೂನ್‌ 30ರೊಳಗೆ ಆಸ್ತಿ ವಿವರ ಸಲ್ಲಿಕೆಗೆ ಆದೇಶ

ಕಾರ್ಪೊರೇಟರ್‌, ಕೌನ್ಸಿಲರ್‌ಗಳು ಸರ್ಕಾರಿ ನೌಕರರು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:00 IST
Last Updated 28 ಆಗಸ್ಟ್ 2019, 20:00 IST
ಪಿ. ವಿಶ್ವನಾಥ ಶೆಟ್ಟಿ
ಪಿ. ವಿಶ್ವನಾಥ ಶೆಟ್ಟಿ   

ಬೆಂಗಳೂರು: ಕಾರ್ಪೊರೇಟರ್‌ಗಳು ಮತ್ತು ಕೌನ್ಸಿಲರ್‌ಗಳು ಮೂರು ವಾರದೊಳಗೆ ತಮ್ಮ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಆದೇಶಿಸಿದ್ದಾರೆ.

ತಮ್ಮ ಆದೇಶ ರಾಜ್ಯದ ಎಲ್ಲ ಮಹಾನಗರಪಾಲಿಕೆಗಳು ಹಾಗೂ ನಗರಸಭೆಗಳಿಗೆ ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಆದೇಶ ಕುರಿತು ಕಾರ್ಪೊರೇಟರ್‌ಗಳಿಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಕಮಿಷನರ್‌ಗೆ ವಿಶ್ವನಾಥ ಶೆಟ್ಟಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, ಇನ್ನು ಮುಂದೆ ಪ್ರತಿವರ್ಷ ಜೂನ್‌ 30ರ ಒಳಗಾಗಿ ಪಾಲಿಕೆಗಳ ಸದಸ್ಯರು ಹಾಗೂ ಕೌನ್ಸಿಲರ್‌ಗಳು ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದೂ ಲೋಕಾಯುಕ್ತರು ತಿಳಿಸಿದ್ದಾರೆ.

ADVERTISEMENT

ಆಸ್ತಿ ವಿವರ ಸಲ್ಲಿಸದ ಕಾರ್ಪೊರೇಟರ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ. ವೆಂಕಟೇಶ್‌ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತರು ಈ ಆದೇಶ ನೀಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ 7 (1)ರ ಪ್ರಕಾರ ಕಾರ್ಪೊರೇಟರ್ ಹಾಗೂ ಕೌನ್ಸಿಲರ್‌ಗಳು ‘ಸಾರ್ವಜನಿಕ ನೌಕರ’ರು ಎಂದು ಪರಿಗಣಿಸಿರುವುದರಿಂದ ಜೂನ್‌ 30ರೊಳಗೆ ಆಸ್ತಿ ವಿವರ ಸಲ್ಲಿಸುವುದು ಅವರ ಆದ್ಯ ಕರ್ತವ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಪೌರಾಡಳಿತ ಕಾಯ್ದೆ ಸೆಕ್ಷನ್‌ 19ರನ್ವಯ ಕಾರ್ಪೊರೇಟರ್‌ಗಳು ಪ್ರತಿ ವರ್ಷ ಮೇಯರ್‌ ಅವರಿಗೆ ಆಸ್ತಿ ವಿವರಗಳನ್ನು ಸಲ್ಲಿಸಬೇಕು. ಆದರೆ, ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್‌ 22ರ ಅನ್ವಯ ಲೋಕಾಯುಕ್ತರ ಮುಂದೆ ವಿವರ ಸಲ್ಲಿಸುವುದು ಕಡ್ಡಾಯ ಎಂಬ ಅರಿವು ಅವರಿಗೆ ಇದ್ದಂತಿಲ್ಲ ಎಂದೂ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.