ಬೆಳಗಾವಿ: ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದ ಜೊತೆ ಸಾಬೂನು, ಬೆಂಕಿಪೊಟ್ಟಣ, ಅಡುಗೆ ಎಣ್ಣೆಯಂತಹ ಸಾಮಗ್ರಿಗಳನ್ನೂ ಖರೀದಿಸುವಂತೆ ಗಿರಾಕಿಗಳನ್ನು ಒತ್ತಾಯಪಡಿಸುತ್ತಿದ್ದಾರೆ, ಇದರಿಂದ ಬಡವರಿಗೆ ಸಮಸ್ಯೆ ಆಗುತ್ತಿದೆ ಎಂದು ಬಿಜೆಪಿಯ ಎಂ.ಕೆ.ಪ್ರಾಣೇಶ್ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ‘ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ನಿಗ
ದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ’ ಎಂದೂ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ‘ಪಡಿತರ ಅಕ್ರಮ ತಡೆಯಲು ಬಯೊಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳ ಮೇಲೂ ನಿಗಾ ಇಡಲು ಆಹಾರ ಸಚಿವರೊಬ್ಬರಿಗೆ ಸಾಧ್ಯವಾಗದು. ಹಾಗಾಗಿ ಶಾಸಕರು ತಮ್ಮ ವ್ಯಾಪ್ತಿಯ ಅಂಗಡಿಗಳಿಗೆ ಆಗೊಮ್ಮೆ ಈಗೊಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.
ಇದರಿಂದ ಸಿಟ್ಟಾದ ವಿರೋಧ ಪಕ್ಷದ ಸದಸ್ಯರು, ‘ಪಡಿತರ ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲವಾದರೆ
ಅಧಿಕಾರ ತ್ಯಜಿಸಿ’ ಎಂದರು.
‘ನ್ಯಾಯಬೆಲೆ ಅಂಗಡಿಗಳಲ್ಲಿಪಡಿತರ ಸಾಮಗ್ರಿ ಜೊತೆ ಇತರ ಸಾಮಗ್ರಿಗಳನ್ನೂ ಮಾರುವಂತೆ ಸರ್ಕಾರ ಹೇಳಿಲ್ಲ. ಈ ಬಗ್ಗೆ ಆಹಾರ ಸಚಿವರಿಂದಲೇ ಉತ್ತರ ಕೊಡಿಸುತ್ತೇನೆ’ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.