ಬೆಂಗಳೂರು: ‘ಸಿನಿಮಾ ನಿರ್ಮಾಪಕ ರಾಮು ನಮ್ಮಿಂದ ಪಡೆದಿರುವ ₹ 65 ಲಕ್ಷ ಸಾಲವನ್ನು ಇನ್ನೂ ಹಿಂದಿರುಗಿಸದ ಕಾರಣ, ಅವರ ಆರ್ಥಿಕ ನೆರವಿನಲ್ಲಿ ಇದೇ 1ರಂದು ತೆರೆ ಕಾಣಬೇಕಿರುವ 99 ಹೆಸರಿನ ಸಿನಿಮಾಕ್ಕೆ ತಡೆ ನೀಡಬೇಕು’ ಎಂದು ಕೋರಿ ಕೋರ್ಟ್ನಲ್ಲಿ ಸಿವಿಲ್ ದಾವೆ ಹೂಡಲಾಗಿದೆ.
ಈ ಕುರಿತಂತೆ ನಗರದ ಮೆಸರ್ಸ್ ಲಕ್ಷ್ಮಿ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ಸ್ ಸಂಸ್ಥೆ ಸಲ್ಲಿಸಿರುವ ಅಸಲು ದಾವೆಯನ್ನು ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಸೋಮವಾರ ವಿಚಾರಣೆ ನಡೆಸಿದರು.
ಅರ್ಜಿದಾರರ ಪರ ವಕೀಲ ಎ.ಗೋಪಿಕೃಷ್ಣ ಮತ್ತು ವಿ.ಸಿ.ಭದ್ರೇಗೌಡ, ‘ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು’ ಎಂದು ಕೋರಿದರು. ಆದರೆ ಇದನ್ನು ನಿರಾಕರಿಸಿದ ನ್ಯಾಯಾಧೀಶರು, ರಾಮು ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಟಿ ಭಾವನಾ ನಟಿಸಿರುವ ‘99’ ಮೇ 1ಕ್ಕೆ ರಾಜ್ಯದಾದ್ಯಂತ ತೆರೆ ಕಾಣಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.