ADVERTISEMENT

ಕೋವಿಡ್‌–19: ರಜೆ ಉದ್ದೇಶದಿಂದ ಕೆಮ್ಮು, ವಾಂತಿ ನಾಟಕವಾಡಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 6:08 IST
Last Updated 6 ಮಾರ್ಚ್ 2020, 6:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೊರಸಾಣೆ ಸರ್ಕಾರಿ ಶಾಲೆಯಲ್ಲಿ ಕೋವಿಡ್‌–19 (ಕೊರೊನಾ) ವೈರಸ್ ಬಗ್ಗೆ ಶಾಲೆಯ ಸಹ ಶಿಕ್ಷಕ ಪ್ರೇಮ್ ಕುಮಾರ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದ ನಂತರ 7 ಮಕ್ಕಳು ಸುಸ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸುಧಾರಿಸಿಕೊಂಡಿದ್ದಾರೆ.

ಗೋರಸಾಣಿ ಶಾಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುತ್ತಿದ್ದಾಗ 7 ವಿದ್ಯಾರ್ಥಿಗಳು ರಜೆ ಸಿಗುತ್ತದೆ ಎಂಬ ಉದ್ದೇಶದಿಂದ ಕೆಮ್ಮು ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಮಹದೇಶ್ವರ ಬೆಟ್ಟದ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ತದನಂತರ ಎಲ್ಲಾ ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ನಂತರ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಶಾಲೆಗೆ ಕಳುಹಿಸಿ ಕೊಟ್ಟಿದ್ದಾರೆ.

ADVERTISEMENT

ಸರ್ಕಾರದ ಆದೇಶದಂತೆ ಗುರುವಾರ ಶಾಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ಅಲ್ಲಿನ ಶಿಕ್ಷಕ ಪ್ರೇಮ್ ಕುಮಾರ್ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕೊರೊನಾ ವೈರಸ್ ಸೋಂಕು ಇದ್ದರೆ ಶಾಲೆಯಿಂದ ರಜೆ ಸಿಗುತ್ತದೆ ಎಂದು ಮೊದಲಿಗೆ ಮೂರು ಮಕ್ಕಳು ಅಸ್ವಸ್ಥಗೊಂಡವರಂತೆ ನಟಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದಾಗ ಯಾವುದೇ ಸಮಸ್ಯೆ ಇಲ್ಲದಿರುವ ಬಗ್ಗೆ ವೈದ್ಯರು ತಿಳಿಸಿದರು.

ನಂತರ ಶಾಲೆಯಲ್ಲಿ ಇನ್ನು 4 ಇದೇ ರೀತಿಯಲ್ಲಿ ಅಸ್ವಸ್ಥಗೊಂಡವರಂತೆ ನಟಿಸಿದ್ದಾರೆ. ವೈದ್ಯರ ತಂಡ ಶಾಲೆಗೆ ಭೇಟಿ ನೀಡಿ ಕುಡಿಯುವ ನೀರು ಹಾಗೂ ಮಕ್ಕಳ ತಪಾಸಣೆ ನಡೆಸಿ ಯಾವುದೇ ಸೋಂಕು ಇಲ್ಲ‌ ಎಂದು ದೃಢಪಡಿಸಿದ್ದಾರೆ. ಶುಕ್ರವಾರ ಎಂದಿನಂತೆ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್ ಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.