ADVERTISEMENT

ತುಮಕೂರಿನಲ್ಲಿ ಕೋವಿಡ್-19ಗೆ ಮೊದಲ ಬಲಿ: ರಾಜ್ಯದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 7:37 IST
Last Updated 27 ಮಾರ್ಚ್ 2020, 7:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿಗೆ ತಗುಲಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಕೆಯಾಗುತ್ತಲೇ ಸಾಗಿದ್ದು, ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ವ್ಯಕ್ತಿ ಬಲಿಯಾಗಿರುವ ಮೊದಲ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ಶಿರಾ ಮೂಲದ 65 ವರ್ಷದ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಮುಂಜಾನೆ ಕೋವಿಡ್-19ಗೆ ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ದೆಹಲಿಯ ಮಸೀದಿಯೊಂದರಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗಿಯಾಗಲು ಮಾರ್ಚ್ 3ರ ಮಧ್ಯಾಹ್ನ 2.30ಕ್ಕೆ ತುಮಕೂರಿನಿಂದ ಸಂಪರ್ಕ ಕ್ರಾಂತಿ ರೈಲಿನ S6 ಬೋಗಿಯಲ್ಲಿ ದೆಹಲಿಗೆ ಪಯಣ ಬೆಳೆಸಿದ್ದರು. ಮೃತ ವ್ಯಕ್ತಿಯ ಕುಟುಂಬದಲ್ಲಿ 20 ಜನರಿದ್ದರು. ಕುಟುಂಬ ಸದಸ್ಯರು ಮತ್ತು ಜತೆಗೆ ಪ್ರಯಾಣಿಸಿದ 13 ಜನರು ಸೇರಿ ಒಟ್ಟು 33 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ADVERTISEMENT

ಮೃತರ ಸಂಪರ್ಕದಲ್ಲಿದ್ದ 16 ಮಂದಿಯನ್ನು ಶಿರಾ ಸರ್ಕಾರಿ ಆಸ್ಪತ್ರೆ ಹಾಗೂ 8 ಮಂದಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿಡಲಾಗಿದೆ. ಇವರ ಕುಟುಂಬದ 8 ಮಂದಿಯ ಪರೀಕ್ಷೆ ಮಾಡಲಾಗಿದ್ದು, ಅವರಿಗೆಸೋಂಕುತಗುಲಿಲ್ಲ.

ಕೋವಿಡ್- 19ನಿಂದ ಮೃತಪಟ್ಟ ವ್ಯಕ್ತಿಯ ಮನೆಯ ಸುತ್ತಮುತ್ತಲಿನ ಮೂರು ಕಿ.ಮೀ ವ್ಯಾಪ್ತಿಯನ್ನು ರೆಡ್ ಅಲರ್ಟ್ ಮತ್ತು ಐದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ವಲಯ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಘೋಷಿಸಿದ್ದಾರೆ.

ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಸೊಂಕು ಪೀಡಿತರ ಸಂಖ್ಯೆ ಶುಕ್ರವಾರ ಬೆಳಿಗ್ಗೆ 724ಕ್ಕೆ ಏರಿಕೆಯಾಗಿದೆ. ಇದುವರೆಗೂ 17ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತ್ತು. ಆದರೆ ದೆಹಲಿಯಲ್ಲಿ ಮೂರು ಹೊಸ ಪ್ರಕರಣಗಳು ಸೇರಿದಂತೆ ಇದೀಗ ಸೋಂಕಿತರ ಸಂಖ್ಯೆ 740ಕ್ಕೆ ಏರಿಕೆಯಾಗಿದ್ದು,ಇದುವರೆಗೂ 18 ಜನರು ಕೋವಿಡ್-19ಗೆ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.