ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ದೃಢಪ್ರಮಾಣ ಶೇ 1ರ ಆಸುಪಾಸಿನಲ್ಲಿಯೇ ಇದೆ. ಆದರೆ ಸಾವಿನ ಸಂಖ್ಯೆಯಲ್ಲಿ ಹೆಚ್ಚೇನು ಇಳಿಕೆಯಾಗಿಲ್ಲ. ಗುರುವಾರ ಕೋವಿಡ್ನಿಂದ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹೊಸದಾಗಿ 1,653 ಮಂದಿಗೆ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದ್ದು, 31 ಸೋಂಕಿತರು ಸಾವಿಗೀಡಾಗಿದ್ದಾರೆ. 24 ಗಂಟೆಯಲ್ಲಿಸುಮಾರು 1.40 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ. ಸೋಂಕು ದೃಢಪ್ರಮಾಣ ಶೇ.1.17 ಇದೆ. ಗುರುವಾರ 2,572 ಮಂದಿಗುಣಮುಖರಾಗಿದ್ದಾರೆ.
ಹೊಸ ಪ್ರಕರಣ ಹೆಚ್ಚಳ: ಮೂರು ದಿನಗಳಿಂದ ಸೋಂಕು ಹೊಸ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸೋಮವಾರ 1,229 ಪ್ರಕರಣಗಳು ವರದಿಯಾಗಿದ್ದರೆ, ಮಂಗಳವಾರ 1,464 ಹೊಸ ಪ್ರಕರಣಗಳಿದ್ದವು. ಬುಧವಾರ 1,639ಕ್ಕೆ ಏರಿಕೆಯಾಗಿತ್ತು. ಗುರುವಾರ ಮತ್ತಷ್ಟು ಏರಿಕೆ ಕಂಡುಬಂದಿದ್ದು ಒಟ್ಟು 1,653 ಹೊಸ ಕೋವಿಡ್ ಪ್ರಕರಣಗಳು ವರದಿ ಆಗಿವೆ.
ಇನ್ನು ಮೊದಲ ಮತ್ತು ಎರಡನೇ ಅಲೆ ಸೇರಿ ಒಟ್ಟು ಸೋಂಕಿತರ ಸಂಖ್ಯೆ 28.89 ಲಕ್ಷ ದಾಟಿದ್ದು, ಒಟ್ಟು ಗುಣಮುಖರ ಸಂಖ್ಯೆ 28.28 ಲಕ್ಷ ಮೀರಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 24,695 ಕ್ಕೆ ಇಳಿಕೆಯಾಗಿದೆ. ಈವರೆಗೆ 36,293 ಸೋಂಕಿತರು ಮೃತಪಟ್ಟಿದ್ದಾರೆ.
ರಾಜಧಾನಿಯಲ್ಲಿ 418 ಹೊಸ ಪ್ರಕರಣ: ಬೆಂಗಳೂರು ನಗರದಲ್ಲಿ 418 ಹೊಸ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡ 229, ಮೈಸೂರು 134, ಕೊಡಗು 107, ತುಮಕೂರು 104, ಹಾಸನ 97 ಹಾಗೂ ಉಡುಪಿ 82 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಉಳಿದಂತೆ ಶಿವಮೊಗ್ಗ 87, ಬೆಳಗಾವಿ 60, ಬೆಂಗಳೂರು ಗ್ರಾಮಾಂತರ 46 ಪ್ರಕರಣಗಳು ಕಂಡುಬಂದಿವೆ. ಉಳಿದ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ 25ನ್ನು ದಾಟಿಲ್ಲ.
ಬೀದರ್ ಮತ್ತು ಯಾದಗಿರಿಯಲ್ಲಿ ಶೂನ್ಯ ಸಾಧನೆ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.